ವಿದ್ಯಾರ್ಥಿ ಬದುಕಿನ ಮೌಲ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ರಘುಪತಿ ಭಟ್
ಉಡುಪಿ, ಸೆ.5: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು. ಈ ವೃತ್ತಿಯಲ್ಲಿ ಸಿಗುವ ಗೌರವ, ಪ್ರೀತಿ, ಆದರಗಳು ಬೇರೆ ಯಾವುದೇ ವೃತ್ತಿಯಲ್ಲಿ ಸಿಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಬದುಕಿನ ವೌಲ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯ ಆಶ್ರಯದಲ್ಲಿ ಉಡುಪಿ ಸೈಂಟ್ ಸಿಸಿಲಿಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.
ಶಿಕ್ಷಕರ ಪ್ರಾಮುಖ್ಯತೆಯನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕಾದರೆ ಪ್ರತಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳು ಜೊತೆಗೂಡಿ ಆಚರಿಸಿಕೊಳ್ಳಬೇಕು. ಎಸೆಸೆಲ್ಸಿ ಮುಂದಿನ ವರ್ಷದಲ್ಲಿ ಪ್ರಥಮ ಸ್ಥಾನ ಬರಲು ಶಿಕ್ಷಕರ ಪ್ರಯತ್ನವು ಬೇಕಾಗಿದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟದೊಂದಿಗೆ ಒಳ್ಳೆಯ ಶಿಕ್ಷಣ ವ್ಯವಸ್ಥೆಯು ಇದೆ. ಶಿಕ್ಷಣದಲ್ಲಿ ಬದಲಾವಣೆ ಬೇಕಾಗಿದೆ. ಶಿಕ್ಷಕರು ಹೊಸ ಚಟುವಟಿಕೆ, ಬೋಧನೆ ಶೈಲಿ, ಅಭ್ಯಾಸಗಳನ್ನು ರೂಢಿಸಿ ಕೊಂಡರೆ ಮಾತ್ರ ಮಕ್ಕಳಿಗೆ ತಿಳಿಸಿಕೊಡಲು ಸಾಧ್ಯ ಎಂದು ಅವರು ತಿಳಿಸಿದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ಶಿಕ್ಷಣದಲ್ಲಿ ಗುರು ಮತ್ತು ಗುರಿ ಬಹಳ ಮುಖ್ಯ. ವಿದ್ಯಾರ್ಥಿಗಳ ಬದುಕಿನಲ್ಲಿ ಒಳ್ಳೆಯ ಗುರು ಗಳು ಸಿಕ್ಕರೆ ಸದಾ ಸ್ಮರಣೀಯರಾಗಿರುತ್ತಾರೆ. ಇಂದು ವಿದ್ಯಾರ್ಥಿಗಳು ಸವಾಲನ್ನು ಎದುರಿಸಲು ವೃತ್ತಿಪರ ಶಿಕ್ಷಣವು ಮುಂದಿನ ದಿನಗಳಲ್ಲಿ ಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳ ಬದುಕು ರೂಪಿ ಸುವಲ್ಲಿ ಶಿಕ್ಷಕರು ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದ್ದಾರೆ. ಕೊರೋನ ಸಮಯದಲ್ಲಿ ಜಿಲ್ಲಾಡಳಿತದೊಂದಿಗೆ ಶಿಕ್ಷಕರು ಕೈಜೋಡಿಸಿ ಸಹಕರಿಸಿದ್ದಾರೆ. ಮಕ್ಕಳನ್ನು ತನ್ನ ಮನೆಯವರಿಗಿಂತ ಹೆಚ್ಚು ಪ್ರೀತಿಸಿ ದ್ದಲ್ಲಿ, ಮಕ್ಕಳ ಮನಸ್ಸನ್ನು ಗೆದ್ದವರು ಆದರ್ಶ ಪ್ರಿಯ ಶಿಕ್ಷಕರಾಗಲು ಸಾಧ್ಯ ಎಂದರು.
ನಿವೃತ್ತ ಶಿಕ್ಷಕರು, ಜಿಲ್ಲಾ ಪ್ರಶಸ್ತಿ ವಿಜೇತರು, ಹಿಂದಿನ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಪಂ ಅಧ್ಯಕ್ಷ ದಿನಕರ ಬಾಬು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಜಿಪಂ ಸದಸ್ಯ ರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷನಯನ ಕಾರಿಂಜ ಉಪಸ್ಥಿತರಿದ್ದರು.