ಮಂಗಳೂರು: ಸಿಐಟಿಯು-ರೈತ ಸಂಘ ಧರಣಿ
ಮಂಗಳೂರು, ಸೆ. 5: ಹಲವು ತಿಂಗಳಿನಿಂದ ದೇಶವನ್ನು ಬಾಧಿಸುತ್ತಿರುವ ಕೊರೋನ ಪಿಡುಗನ್ನು ಎದುರಿಸುವ ಹೋರಾಟದಲ್ಲಿ ಜನತೆಯನ್ನು ತೊಡಗಿಸಬೇಕಾಗಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ದೇಶದ ಜನತೆಗೆ ಮಾರಕವಾಗಿದೆ ಎಂಬುದಾಗಿ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.
ರಾಜ್ಯ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ವಿತರಣಾ ಕಾಯ್ದೆ ಹಾಗೂ ಕಾರ್ಮಿಕ ಕಾನೂನುಗಳಿಗೆ ಕೇಂದ್ರ ರಾಜ್ಯ ಸರಕಾರಗಳು ಮಾಡುತ್ತಿರುವ ತಿದ್ದುಪಡಿಗಳನ್ನು ವಿರೋಧಿಸಿ ಹಾಗೂ ಕೋವಿಡ್ ಸಂದರ್ಭ ಬಡವರಿಗೆ ಮುಂದಿನ 6 ತಿಂಗಳ ಕಾಲ ತಲಾ 10 ಕೆಜಿ ಆಹಾರ ಧಾನ್ಯ, ಕುಟುಂಬಕ್ಕೆ ತಿಂಗಳಿಗೆ ಕನಿಷ್ಟ 7500 ರೂ. ಪರಿಹಾರ ಹಾಗೂ ಉದ್ಯೋಗ ಖಾತ್ರಿಯಲ್ಲಿ ಕನಿಷ್ಟ 200 ದಿನಗಳ ಕೂಲಿ ಮತ್ತು ದಿನಗೂಲಿ ಹೆಚ್ಚಳವನ್ನು ಆಗ್ರಹಿಸಿ ಸಿಐಟಿಯು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾ ಸಮಿತಿಯು ಜಂಟಿಯಾಗಿ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಶನಿವಾರ ಹಮ್ಮಿಕೊಂಡ ಧರಣಿ ಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿದರು. ಸಿಐಟಿಯು ಮುಖಂಡರಾದ ವಸಂತ ಆಚಾರಿ, ಯು.ಬಿ.ಲೋಕಯ್ಯ, ರಮಣಿ ಮೂಡುಬಿದಿರೆ, ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯ ಮುಖಂಡರಾದ ಸದಾಶಿವದಾಸ್, ವಾಸುದೇವ ಉಚ್ಚಿಲ್, ಜಯಂತ ಅಂಬ್ಲಮೊಗರು ಪಾಲ್ಗೊಂಡಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಸ್ವಾಗತಿಸಿದರು. ಸಿಐಟಿಯು ದ.ಕ.ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ವಿಟ್ಲ ವಂದಿಸಿದರು.