“ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋಟ್ರ್ಸ್” ಪುಸ್ತಕ ಲೋಕಾರ್ಪಣೆ

ಮೈಸೂರು,ಸೆ.6: ಕರ್ನಾಟಕದ ಪ್ರತಿಯೊಂದು ಕೋಟೆಗಳ ಚಿತ್ರಗಳನ್ನು ಅತ್ಯಂತ ಸೃಜನಶೀಲತೆಯಿಂದ ಸೆರೆಹಿಡಿದು 'ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋಟ್ರ್ಸ್' ಪುಸ್ತಕದಲ್ಲಿ ದಾಖಲಿಸಿರುವುದು ಉತ್ತಮವಾದ ಕೆಲಸ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ರವಿವಾರ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರು ಸೆರೆಹಿಡಿದ ಕೋಟೆ ಚಿತ್ರಗಳ ಸಂಗ್ರಹವಾದ 'ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋಟ್ರ್ಸ್' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೀದರ್ ನಿಂದ ಕಾಸರಗೋಡಿನವರೆಗೂ ಅತ್ಯಂತ ವ್ಯವಸ್ಥಿತವಾಗಿ ಕೋಟೆಯ ಚಿತ್ರಗಳನ್ನು ಹೊಂದಿರುವ ಪುಸ್ತಕ ಇದಾಗಿದೆ ಎಂದು ಹೇಳಿದರು.
ಛಾಯಾಗ್ರಾಹಕರಾದ ವಿಶ್ವನಾಥ್ ಸುವರ್ಣ ಅವರು ಬಹಳ ಶ್ರಮವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕೋಟೆಗಳ ಚಿತ್ರಗಳನ್ನು ತೆಗೆದು, ಅದಕ್ಕೆ ಪುಸ್ತಕ ರೂಪ ನೀಡಿರುವುದು ಪ್ರಶಂಸನೀಯ. ಈ ಪುಸ್ತಕಗಳನ್ನು ನಾನು ಹೆಚ್ಚು ಖರೀದಿಸಿ ಅವರಿಗೆ ಪ್ರೋತ್ಸಾಹಿಸುತ್ತೇನೆ ಎಂದು ತಿಳಿಸಿದರು.
ಆನ್ಲೈನ್ನಲ್ಲಿ ಪುಸ್ತಕ ಬಿಡುಗಡೆಗೊಳಿಸಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ವಿಶ್ವನಾಥ್ ಸುವರ್ಣ ಅವರು ತಮ್ಮ ವಿಶೇಷ ಕೈಚಳದಿಂದ ಪ್ರತಿಯೊಂದು ಚಿತ್ರಗಳನ್ನು ಸೆರೆಹಿಡಿದು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂತಹ ಚಿತ್ರಗಳನ್ನು ಕಾಣುವುದು ಅಪರೂಪ ಎಂದರು.
ಯಾವುದೇ ಚಿತ್ರವನ್ನು ತೆಗೆಯಲು ಬಹಳ ಸಂಯಮ, ಶಾಂತಿ ಮತ್ತು ಶಿಸ್ತು ಅವಶ್ಯಕ. ಈ ಅಂಶಗಳನ್ನು ಗಮನದಲ್ಲಿರಿಸಿ ಚಿತ್ರಗಳನ್ನು ಸೆರೆಹಿಡಿದರೆ ಅತ್ಯಂತ ಪರಿಣಾಕಾರಿ ಆಗಿರುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಅವರು ಮಾತನಾಡಿ, ಯಾವುದೇ ಪತ್ರಿಕೆಯಲ್ಲಿ ಸುದ್ದಿಗಿಂತ ಹೆಚ್ಚಾಗಿ ಚಿತ್ರಗಳು ಓದುಗರನ್ನು ಆಕರ್ಷಿಸಿಸುತ್ತವೆ. ನಿರೀಕ್ಷೆಗೂ ಮೀರಿ ಚಿತ್ರಗಳನ್ನು ತೆಗೆದರೆ ಸಂಪಾದಕರಿಗೆ ಅದಕ್ಕಿಂತ ದೊಡ್ಡ ಸಂತೋಷ ಇರುವುದಿಲ್ಲ. ಅಂತಹ ಉತ್ತಮ ಚಿತ್ರಗಳನ್ನು ವಿಶ್ವನಾಥ್ ಸುವರ್ಣ ಅವರು ತಮ್ಮ ವೃತ್ತಿಜೀವನದಲ್ಲಿ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಛಾಯಾಗ್ರಾಹಕರು ಪ್ರತಿಕ್ಷಣವು ಕುತೂಹಲನಾಗಿ ವಿಭಿನ್ನವಾದ ಚಿತ್ರಗಳನ್ನು ಕ್ಲಿಕ್ಕಿಸುವ ಅಭಿರುಚಿ ಹೊಂದಿರಬೇಕು. ಆಗಿದ್ದಲ್ಲಿ ಮಾತ್ರ ವಿಶೇಷವಾದ ಚಿತ್ರಗಳು ಸೆರೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
"ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಕ್ರಮ"
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಹೆಸರು ಬಹಿರಂಗಪಡಿಸಲಿ. ಮಾಫಿಯಾದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದರೂ, ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.







