ಸಂಗೀತ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತೆ ಕಸ್ತೂರಿ ಕಾಮತ್ ನಿಧನ
ಮಂಗಳೂರು, ಸೆ. 6: ವಿಶೇಷ ಸಾಮರ್ಥ್ಯದ ಗಾಯಕಿ, ಸಂಗೀತ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತೆ ಕಸ್ತೂರಿ ಕಾಮತ್ (45) ಶನಿವಾರ ಹೃದಯಾಘಾತದಿಂದ ನಿಧನರಾದರು.
ಪ್ರತಿಭಾನ್ವಿತ ಗಾಯಕಿಯಾದ ಕಸ್ತೂರಿ ಅವರು ದೃಷ್ಟಿಹೀನರಾಗಿದ್ದರು ಕೂಡಾ ಅವರ ಸಾಧನೆ ಅಪಾರವಾಗಿದೆ. ಕಸ್ತೂರಿ ಕಾಮತ್ ಅವರು ಕಳೆದ 20 ವರ್ಷಗಳಿಂದ ಎಸ್ಡಿಎಂ ಮಂಗಳಜ್ಯೋತಿ ಶಾಲೆಯಲ್ಲಿ ಸಂಗೀತ ಕಲಿಸುತ್ತಿದ್ದರು. ಅಲ್ಲದೆ, ಮಂಗಳೂರು, ಬೆಂಗಳೂರು ಮತ್ತು ಕೇರಳದಂತಹ ಸ್ಥಳಗಳಲ್ಲಿ ಟಿವಿ ಮತ್ತು ರೇಡಿಯೊದಲ್ಲಿ 5,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದರು.
ಕಸ್ತೂರಿ ಅವರ ಪ್ರತಿಭೆ ಮತ್ತು ಸಾಧನೆಗಳನ್ನು ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. 2009ರ ಡಿಸೆಂಬರ್ನಲ್ಲಿ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ವಿಭಿನ್ನ ಸಾಮರ್ಥ್ಯದ ಸಂಗೀತ ಶಿಕ್ಷಕಿ ಪ್ರಶಸ್ತಿ ನೀಡಲಾಯಿತು.
ಇವರಿಗೆ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಹೆಲೆನ್ ಕೆಲ್ಲರ್ ಡೇ ವಿಶ್ವ ಮಹಿಳಾ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ನಮ್ಮ ಕುಡ್ಲಾ ಪ್ರಶಸ್ತಿ, ಜೇಸಿಯಿಂದ ಅತ್ಯುನ್ನತ ಮಹಿಳಾ ಪ್ರಶಸ್ತಿ, ಕೊಂಕಣಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪುರಂದರೋತ್ಸವ ಪ್ರಶಸ್ತಿ, ವಿಭಿನ್ನ ಸಾಮರ್ಥ್ಯ ಹೊಂದಿರುವವರಿಗೆ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿ, ಅತ್ಯುತ್ತಮ ಸಂಗೀತ ಶಿಕ್ಷಕರಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿ, ಸಾಯಿರಾಂ ಹಾಗೂ ಸಂಗೀತಕ್ಕಾಗಿ ಸುಮಸೌರಭ ಪ್ರಶಸ್ತಿಗಳು ಲಭಿಸಿವೆ.