ಸರಕಾರದ ನಿರ್ಲಕ್ಷ್ಯದಿಂದ ಚಾಲಕರಿಗೆ ಕೋವಿಡ್ ಪರಿಹಾರ ವಿಳಂಬ: ಸುರೇಶ್ ಕಲ್ಲಾಗರ ಆರೋಪ
ಕುಂದಾಪುರ, ಸೆ.7: ಸರಕಾರದ ಲಾಕ್ಡೌನ್ ದುಡಿಯುವ ವರ್ಗದ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ದಿನನಿತ್ಯ ದುಡಿದುಣ್ಣುವ ಚಾಲಕರಿಗೆ ಇಂದು ಸರಕಾರ ಕೋವಿಡ್ ಪರಿಹಾರ ಮಂಜೂರು ಮಾಡುವಲ್ಲಿಯೂ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.
ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು)ದ 44ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅರು ರವಿವಾರ ಮಾತನಾಡುತಿದ್ದರು.
ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ ಮಾತನಾಡಿ, ಕರೋನ ತಡೆಗಟ್ಟುವಲ್ಲಿ ಮೋದಿ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ತೀವ್ರ ರೀತಿ ಯಲ್ಲಿ ಜಿಡಿಪಿ ಕುಸಿಯುತ್ತಿದೆ ಈ ವೈಫಲ್ಯ ಮರೆಮಾಚಲು ಪ್ರಧಾನಿಯವರು ನವಿಲು, ಯುದ್ಧ ಎಂಬ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಜನರ ಸಮಸ್ಯೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಟೀಕಿಸಿದರು.
ಅಧ್ಯಕ್ಷತೆಯನ್ನು ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸಂತೋಷ ಕಲ್ಲಾಗರ ಲೆಕ್ಕಪತ್ರ ಮಂಡಿಸಿದರು. ಮಹಾಸಭೆ ಯಲ್ಲಿ ಹಿಂದಿನ ಸಮಿತಿಯನ್ನೇ ಮರು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿ ರಮೇಶ್ ವಿ. ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಕರುಣಾಕರ ಎಚ್., ಸಲಹೆಗಾರ ಚಂದ್ರ ವಿ. ಉಪಸ್ಥಿರಿದ್ದರು. ರವಿ ವಿ.ಎಂ. ವಂದಿಸಿದರು.