ಖಾಸಗಿ ಆಸ್ಪತ್ರೆಗಳಿಂದ ದುಬಾರಿ ಬಿಲ್: ಕ್ರಮಕ್ಕೆ ಡಿವೈಎಫ್ಐ ಆಗ್ರಹ
ಮಂಗಳೂರು, ಸೆ. 7: ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಕುರಿತು ರಾಜ್ಯ ಸರಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಆದಾಗ್ಯೂ, ನಗರದ ಖಾಸಗಿ ಆಸ್ಪತ್ರೆಗಳು ದುಬಾರಿ ದರ ವಿಧಿಸುತ್ತಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಡಿವೈಎಫ್ಐ ನಿಯೋಗವು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿತು.
ಸೋಂಕಿತರ ಚಿಕಿತ್ಸೆಗೆ ವಿಧಿಸುವ ದರಗಳ ಕುರಿತು ಸರಕಾರ ಸ್ಪಷ್ಟ ಆದೇಶ ನೀಡಿದೆ. ಅದರಂತೆ ನಡೆದುಕೊಳ್ಳದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮದ ಕುರಿತು ಮುಖ್ಯಮಂತ್ರಿ ಹಲವು ಬಾರಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೂ ನಗರದ ಖಾಸಗಿ ಆಸ್ಪತ್ರೆಗಳು ಕೊರೋನ ಸೋಂಕಿ ತರಿಗೆ ನಿಯಮ ಮೀರಿ ದುಬಾರಿ ದರ ವಿಧಿಸುತ್ತಿವೆ. ಇದರಿಂದ ಜನಸಾಮಾನ್ಯರು ಕೋವಿಡ್ನ ಗಂಭೀರ ರೋಗಲಕ್ಷಣಗಳು ಕಾಣಿಸಿಕೊಂಡರೂ ಆಸ್ಪತ್ರೆಗಳಿಗೆ ದಾಖಲಾಗಲು ಹಿಂಜರಿಯುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಂಗಳೂರಿನ ವಿವಿಧ ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿ ಪಡಿಸಿದ ದರವನ್ನೂ ಮೀರಿ ದುಪ್ಪಟ್ಟು ದರ ವಿಧಿಸಿದ ಬಿಲ್ಗಳನ್ನು ನಿಯೋಗವು ಜಿಲ್ಲಾ ಆರೋಗ್ಯಾಧಿಕಾರಿಗೆ ಸಲ್ಲಿಸಿತು. ಜೊತೆಗೆ, ಈ ಕುರಿತು ಸರಿಯಾದ ತನಿಖೆ ನಡೆಸಬೇಕು. ಕೊರೋನದಂತಹ ಸಾಂಕ್ರಾಮಿಕ ರೋಗ ಹರಡಿರುವ ಕೆಟ್ಟ ಸಂದರ್ಭವನ್ನೂ ನಿಯಮಬಾಹಿರವಾಗಿ ಲಾಭದಾಯಕ ಸಂದರ್ಭವಾಗಿ ಪರಿವರ್ತಿಸಲು ಯತ್ನಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಕಡಿವಾಣ ಹಾಕಬೇಕು ಎಂದೂ ಒತ್ತಾಯಿಸಲಾಯಿತು.
ಸರಕಾರದ ಆದೇಶದ ಪ್ರಕಾರ ಜನರಲ್ ವಾರ್ಡ್ ಗೆ 10 ಸಾವಿರ ರೂ., ಪ್ರತ್ಯೇಕ ಕೋಣೆಗೆ 12 ಸಾವಿರ, ವೆಂಟಿಲೇಟರ್ ರಹಿತ ಐಸಿಯುಗೆ 15 ಸಾವಿರ, ವೆಂಟಿಲೇಟರ್ ಸಹಿತ ಐಸಿಯು 25 ಸಾವಿರ ದರವನ್ನು ಖಾಸಗಿ ಆಸ್ಪತ್ರೆಗಳು ದಿನವೊಂದಕ್ಕೆ ವಿಧಿಸಬಹುದು. ಈ ದರ ನಿಗದಿ ತೀರಾ ದುಬಾರಿ ಆಗಿದೆ ಎಂದು ಡಿವೈಎಫ್ಐ ಸೇರಿದಂತೆ ಹಲವು ಜನಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಖಾಸಗಿ ಆಸ್ಪತ್ರೆಗಳು ಈ ದರವನ್ನೂ ಮೀರಿ ಹೆಚ್ಚುವರಿ ದರ ವಿಧಿಸುತ್ತಿರುವುದು ದಿನನಿತ್ಯ ವರದಿಯಾಗುತ್ತಿದೆ. ಸರಕಾರವು ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸೋಂಕಿತ ವ್ಯಕ್ತಿ ಸಾಮಾನ್ಯ ಕೋಣೆಯಲ್ಲಿ ನ್ಯೂಮೋನಿಯ, ಅಲ್ಪ ಮಟ್ಟದ ಉಸಿರಾಟ ತೊಂದರೆಯೊಂದಿಗೆ ದಾಖಲಾಗಿದ್ದರು. ಸರಕಾರದ ನಿಯಮ ಪ್ರಕಾರ ಇವರಿಗೆ ಔಷಧ, ಪರೀಕ್ಷೆ ಸೇರಿ ದಿನವೊಂದಕ್ಕೆ 12 ಸಾವಿರ ದರ ವಿಧಿಸಬೇಕು. ಆದರೆ ನಗರದ ಖಾಸಗಿ ಆಸ್ಪತ್ರೆಯೊಂದು ವಾರ್ಡ್ ಸರ್ವೀಸ್ ಹೆಸರಲ್ಲಿ ಆಮ್ಲಜನಕ ನೀಡಿದ್ದಕ್ಕೆ ದಿನವೊಂದಕ್ಕೆ ಹೆಚ್ಚುವರಿ 4,500 ರೂಪಾಯಿಯಂತೆ 10 ದಿನಕ್ಕೆ 45 ಸಾವಿರ ರೂ. ದರ ವಿಧಿಸಿದೆ. ರಕ್ತ ಪರೀಕ್ಷೆಗೆ 15 ಸಾವಿರ ಹೆಚ್ಚುವರಿ ದರ, ಔಷಧಿಗಳಿಗಂತೂ ಅತಿ ದುಬಾರಿ ಒಂದು ಲಕ್ಷ ರೂಪಾಯಿ ದರ ವಿಧಿಸಿದೆ. ಒಟ್ಟಾರೆ 11 ದಿನಗಳಿಗೆ ಸರಿ ಸುಮಾರು ಮೂರು ಲಕ್ಷ ರೂಪಾಯಿ ಬಿಲ್ ವಿಧಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿವರವಾದ ಬಿಲ್ನ್ನು ರೋಗಿಯ ಕಡೆಯವರಿಗೆ ನೀಡದೆ ಕತ್ತಲಲ್ಲಿ ಇಟ್ಟಿದೆ. ಅದರಲ್ಲೂ ಗಂಭೀರ ಸ್ಥಿತಿಯಲ್ಲಿರುವ ಕೊರೋನ ಸೋಂಕಿತರಿಗೆ ನೀಡುವ ದುಬಾರಿ ‘COVIFOR’ ಇಂಜೆಕ್ಷನ್ನ್ನು ಇಲ್ಲಿ ಬಳಸಲಾಗಿದೆ. ಹೊರಗೆ 2,200 ರೂ.ಗೆ ಸಿಗುತ್ತದೆ ಎನ್ನಲಾದ ಈ ಔಷಧಿಯನ್ನು ಆಸ್ಪತ್ರೆ 5,400 ರೂ. ದರ ವಿಧಿಸಿದೆ. ತಲಾ ಆರು ಇಂಜಕ್ಷನ್ ಕೊಡಬೇಕಾಗುವ ಈ ಔಷಧಿಯನ್ನು ವಿಪರೀತ ಲಾಭದ ಕಾರಣ ಕ್ಕಾಗಿಯೇ ಸೋಂಕಿತರಿಗೆ ನೀಡಲಾಗುತ್ತಿದೆ ಎಂಬ ಅನುಮಾನ ಇದೆ. ಈ ಔಷಧಿಯ ಬಳಕೆಗೆ ಸರಕಾರದ ಕಡೆಯಿಂದ ಬಿಗು ಶರತ್ತುಗಳು ಇದ್ದು, ಖಾಸಗಿ ಆಸ್ಪತ್ರೆಗಳು ಲಾಭದ ಆಸೆಗೆ ಆ ಷರತ್ತು ಮೀರಿರುವ ಸಾಧ್ಯತೆ ಇದೆ. ಈ ಕುರಿತು ತನಿಖೆ ನಡೆಸಿದರೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಅವ್ಯವಹಾರ ಬಯಲಿಗೆ ಬರಲಿದೆ ಎಂದೂ ತಿಳಿಸಲಾಗಿದೆ.
ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆಗೆ ಜಿಲ್ಲಾಡಳಿತ ಎಂಟು ಖಾಸಗಿ ಮೆಡಿಕಲ್ ಕಾಲೇಜು, ಒಂದು ಖಾಸಗಿ ಆಸ್ಪತ್ರೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಆಯುಷ್ಮಾನ್ ಯೋಜನೆಯಡಿ ಕಡಿಮೆ ಮೊತ್ತ ದೊರಕುವ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳು ಬೆಡ್ ಖಾಲಿ ಇಲ್ಲ ಎಂದು ರೋಗಿಗಳನ್ನು ಹಿಂದಕ್ಕೆ ಕಳಿಸುವುದು, ಅದರಲ್ಲಿಯೂ ಗಂಭೀರ ಸ್ಥಿತಿಯಲ್ಲಿ ಇದ್ದು ಐಸಿಯು ಬೇಕಾದ ಆಯುಷ್ಮಾನ್ ಯೋಜನೆಯ ರೋಗಿ ಗಳನ್ನು ಐಸಿಯು ಇಲ್ಲ ಎಂದು ದಾಖಲಿಸಲು ನಿರಾಕರಿಸುವುದು ಕಂಡು ಬರುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿಯೋಗವು ಒತ್ತಾಯಿಸಿದೆ.
ಆರೋಗ್ಯ ಇಲಾಖೆಯ ವಿಶೇಷ ತಂಡವೊಂದು ದಿಢೀರ್ ಭೇಟಿಯ ಮೂಲಕ ಖಾಸಗಿ ಆಸ್ಪತ್ರೆಗಳನ್ನು ಪರಿಶೀಲನೆ ಮಾಡುವ ಕ್ರಮ ಜಾರಿಗೆ ತರಬೇಕು. ತಪ್ಪಿತಸ್ಥ ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಂಡು ಈಗ ಇರುವ ಅವ್ಯವಸ್ಥೆಯನ್ನು ಸರಿಪಡಿಸಿ, ಜನತೆಗೆ ನ್ಯಾಯ ಒದಗಿಸಬೇಕು ಎಂದು ನಿಯೋಗ ಆಗ್ರಹಿಸಿತು.
ನಿಯೋಗದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮುಖಂಡರಾದ ಸಂತೋಷ್ ಬಜಾಲ್, ಅಶ್ರಫ್ ಕೆ.ಸಿ.ರೋಡ್, ನಿತಿನ್ ಕುತ್ತಾರ್, ಸುನಿಲ್ ತೇವುಲ ಉಪಸ್ಥಿತರಿದ್ದರು.