ಕೆಎಸ್ಸಾರ್ಟಿಸಿ ಬಸ್ಗೆ ಎಂಆರ್ಪಿಎಲ್ನ ಇಂಧನ ಪೂರೈಕೆ
ಮಂಗಳೂರು, ಸೆ.7: ರಾಜ್ಯದ ಏಕೈಕ ಹೈಡ್ರೋಕಾರ್ಬನ್ ಸಂಸ್ಕರಣಾಗಾರವಾದ ಎಂಆರ್ಪಿಎಲ್ನಲ್ಲಿ ಉತ್ಪಾದಿಸಲಾದ ಡೀಸೆಲ್ ಈಗ ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಕರ್ನಾಟಕದ ನರನಾಡಿಗಳಾದ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳಿಗೆ ಪೂರೈಕೆಯಾಗಲಿದೆ.
ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳು ರಾಜ್ಯದ ಮತ್ತು ಹೊರರಾಜ್ಯದ ಪ್ರತಿಯೊಂದು ಮೂಲೆ, ಮೂಲೆ ತಲುಪುತ್ತವೆ. ಈ ಎಲ್ಲ ಬಸ್ಗಳಿಗೆ ಸರಬರಾಜುದಾರರಾಗಿರುವ ಎಚ್ಪಿಸಿಎಲ್ ಈಗ ಮಂಗಳೂರು ಸಂಸ್ಕರಣಾಗಾರದಿಂದ ಈ ಎಲ್ಲ ಬಸ್ಗಳಿಗೆ ಇಂಧನವನ್ನು ಪೂರೈಸಲಿದೆ.
ಸದ್ಯ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳಿಗೆ ಡೀಸೆಲ್ ಪೂರೈಸುವ ಟೆಂಡರ್ನ್ನು ಎಚ್ಪಿಸಿಎಲ್ ನಿರ್ವಹಿಸುತ್ತಿದೆ. ಈ ಸಂಪೂರ್ಣ ಪೂರೈಕೆಗಾಗಿ ಎಚ್ಪಿಸಿಎಲ್, ಎಂಆರ್ಪಿಎಲ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಹೊಂದಾಣಿಕೆ ಆ.29ರಿಂದರಲೇ ಪ್ರಾರಂಭವಾಗಿದೆ. ಈ ಟೆಂಡರ್ ಅಡಿಯಲ್ಲಿ ಎಂಆರ್ಪಿಎಲ್, ಎಚ್ಪಿಸಿಎಲ್ಯೊಂದಿಗೆ ಕೆಎಸ್ಸಾರ್ಟಿಸಿಗೆ ಮೊದಲ ಲೋಡ್ನ್ನು ಸೆ.2ರಂದು ರವಾನಿಸಲಾಗಿದೆ.
ಈ ಒಡಂಬಡಿಕೆಯು ಕಳೆದ ಹಣಕಾಸು ವರ್ಷದ ಮಾರಾಟಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಡೀಸೆಲ್ ನೇರ ಮಾರಾಟವನ್ನು ಕನಿಷ್ಠ 20ಪಟ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಂಆರ್ಪಿಎಲ್ ತನ್ನ ಚಿಲ್ಲರೆ ಮಾರಾಟ (Retail Outlet) ಜಾಲವನ್ನು ಕರ್ನಾಟಕ ಮತ್ತು ಕೇರಳದಲ್ಲಿ ವಿಸ್ತರಿಸುತ್ತಿದೆ. ಅನೇಕ ಚಿಲ್ಲರೆ ಮಾರಾಟ ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಜಿಜಿಎಂ ಮಾರ್ಕೆಟಿಂಗ್ನ ಸತ್ಯನಾರಾಯಣ ಎಚ್.ಸಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.