ಕಾದಂಬರಿಕಾರ ಬೇಲೂರು ಕೃಷ್ಣಮೂರ್ತಿ ನಿಧನ
ಬೆಂಗಳೂರು, ಸೆ.8: ಪತ್ತೇದಾರಿ ಕಾದಂಬರಿಕಾರ ಹಾಗೂ ಶತನಾಟಕ ಸಾರ್ವಭೌಮ ಎಂದು ಹೆಸರು ಗಳಿಸಿದ್ದ ಬೇಲೂರು ಕೃಷ್ಣಮೂರ್ತಿ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಂಗಳವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ 90ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದ ಬೇಲೂರು ಕೃಷ್ಣಮೂರ್ತಿ ಅವರು, ಬಲಿದಾನ, ಭಂಡ ಬಾಳು, ಅಸಲಿ ನಕಲಿ, ಆಹುತಿ ಸೇವೆ, ಜ್ವಾಲೆ ಹೀಗೆ ನೂರಕ್ಕೂ ಹೆಚ್ಚು ನಾಟಕಗಳನ್ನ ರಚಿಸಿ, ಕನ್ನಡ ಸಾಹಿತ್ಯಲೋಕದಲ್ಲಿ ಶತನಾಟಕ ಸಾರ್ವಭೌಮ ಎಂದು ಕರೆಯಿಸಿಕೊಂಡಿದ್ದಾರೆ.
ದಾಹ, ಪುತ್ರ ವಾತ್ಸಲ್ಯ, ಬೆಟ್ಟದ ಬೈರಾಗಿ ಹೀಗೆ ಹತ್ತಕ್ಕೂ ಹೆಚ್ಚು ಕಾದಂಬರಿಗಳನ್ನ ರಚಿಸಿದ್ದ ಬೇಲೂರು ಕೃಷ್ಣಮೂರ್ತಿಯವರು, 1981ರಲ್ಲಿ ತೀರದ ಬಯಕೆ ಎಂಬ ಸಿನಿಮಾವನ್ನ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದರು.
ಬೇಲೂರು ಕೃಷ್ಣಮೂರ್ತಿ ಅವರು ತಮ್ಮ ದೇಹವನ್ನು ಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಬೇಲೂರಿನಲ್ಲಿ ಅವರ ಅಂತಿಮ ದರ್ಶನಕ್ಕೆ ಕುಟುಂಬ ವರ್ಗ ವ್ಯವಸ್ಥೆ ಮಾಡಿದ್ದು, ಸಂಜೆ ವೇಳೆಗೆ ಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆಗೆ ಪಾರ್ಥಿವ ಶರೀರವನ್ನ ಕುಟುಂಬ ವರ್ಗ ಹಸ್ತಾಂತರ ಮಾಡಲಿದೆ.







