ನಮ್ಮ ಮೆಟ್ರೋ ಭೂಮಿ ಸ್ವಾಧೀನಕ್ಕೆ ಸರಕಾರ ಅನುಮತಿ
![ನಮ್ಮ ಮೆಟ್ರೋ ಭೂಮಿ ಸ್ವಾಧೀನಕ್ಕೆ ಸರಕಾರ ಅನುಮತಿ ನಮ್ಮ ಮೆಟ್ರೋ ಭೂಮಿ ಸ್ವಾಧೀನಕ್ಕೆ ಸರಕಾರ ಅನುಮತಿ](https://www.varthabharati.in/sites/default/files/images/articles/2020/09/8/258292-1599572367.jpg)
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.8: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಿಸಿದ ಮಾರ್ಗ ತುಮಕೂರು ರಸ್ತೆಯಲ್ಲಿ ಬರುವ ಚಿಕ್ಕಬಿದರಕಲ್ಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೆಚ್ಚುವರಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಿಎಂಆರ್ಸಿಎಲ್ಗೆ ಸರಕಾರ ಅನುಮತಿ ನೀಡಿದೆ.
1,855 ಚದರ ಮೀಟರ್ ಭೂಮಿಯನ್ನು ನಿಗಮವು ಸ್ವಾಧೀನ ಮಾಡಿಕೊಳ್ಳಲಿದೆ. ಉದ್ದೇಶಿತ ಚಿಕ್ಕಬಿದರಕಲ್ಲು ನಿಲ್ದಾಣದ ಎರಡೂ ಬದಿಗಳಲ್ಲಿ ಅಂದರೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಶ್ರೀಕಂಠಪುರ, ಅಂಚೆಪಾಳ್ಯ, ಚಿಕ್ಕಬಿದರಕಲ್ಲು ಮತ್ತಿತರ ಗ್ರಾಮಗಳಿವೆ. ಅಲ್ಲಿ ಮೆಟ್ರೋ ನಿಲ್ದಾಣಕ್ಕೆ ತೆರಳಲು ಸಂಪರ್ಕ ರಸ್ತೆ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ ಆಗಿತ್ತು.
ಉತ್ತರದಲ್ಲಿ 1,855 ಚ.ಮೀ. ಜಾಗದಲ್ಲಿ ಬರುವ ಕಿರ್ಲೋಸ್ಕರ್, ಜಿಂದಾಲ್ ಕಂಪೆನಿ ಸೇರಿ ಒಟ್ಟಾರೆ ಆರು ಖಾಸಗಿ ಸ್ಥಿರಾಸ್ತಿ ಸ್ವಾಧೀನಪಡಿಸಿಕೊಳ್ಳಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಉಳಿದಂತೆ ನಿಲ್ದಾಣದ ಇನ್ನೊಂದು ಬದಿ ದಕ್ಷಿಣದಲ್ಲಿ 12 ಮೀ. ಅಗಲ ಮತ್ತು 700 ಮೀ. ಉದ್ದದರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಬಿಡಿಎ ಬಳಿ ಇದೆ. ಶ್ರೀಕಂಠಪುರದಲ್ಲಿ ರಸ್ತೆಯೊಂದರ ಅಭಿವೃದ್ಧಿಗೂ ಬಿಎಂಆರ್ಸಿಎಲ್ ಒಪ್ಪಿದ್ದು, ಮುಂದೆ ಬೀದಿ ದೀಪ ಸಹಿತ ಸುಸಜ್ಜಿತ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.