ಉಡುಪಿ: ಮಠದಲ್ಲಿ ಗುರುವಾರ-ಶುಕ್ರವಾರ ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ
ಭಕ್ತರಿಗೆ ವಿತರಿಸಲು ಒಂದು ಲಕ್ಷ ಚಕ್ಕುಲಿ, ಉಂಡೆ ಸಿದ್ಧ
ಉಡುಪಿ, ಸೆ. 9: ಉಡುಪಿಯ ಶ್ರೀಕೃಷ್ಣ ಮಠದಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸರಕಾರದ ಆದೇಶ ಪಾಲನೆಯೊಂದಿಗೆ ಸರಳ ರೀತಿಯಲ್ಲಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೋವಿಡ್-19 ನಿರ್ಬಂಧದ ಹಿನ್ನೆಲೆಯಲ್ಲಿ ಈ ಬಾರಿ ಉತ್ಸವದಲ್ಲಿ ಉತ್ಸಾಹ ದಿಂದ ಪಾಲ್ಗೊಳ್ಳಲು ಭಕ್ತಾಧಿಗಳಿಗೆ ಸಾಧ್ಯವಾಗದಿರುವುದರಿಂದ, ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಸಾಧ್ಯ ವಾದಷ್ಟು ಭಕ್ತರಿಗೆ ಕೃಷ್ಣ ಪ್ರಸಾದ ವಿತರಣೆ ಮಾಡ ಬೇಕೆಂಬ ಉದ್ದೇಶದಿಂದ ಮಠದಲ್ಲಿ ಒಂದು ಲಕ್ಷ ಉಂಡೆ ಹಾಗೂ ಒಂದು ಲಕ್ಷ ಚಕ್ಕುಲಿಯನ್ನು ತಯಾರಿಸಿ ವಿತರಿಸಲು ಸಿದ್ಧತೆಯನ್ನು ನಡೆಸಲಾಗಿದೆ.
ಕೃಷ್ಣ ಜನ್ಮಾಷ್ಟಮಿ ಎಂಬುದು ಉಡುಪಿಯ ಮಟ್ಟಿಗೆ ಅತೀ ದೊಡ್ಡ ಹಬ್ಬ. ಜನರು ಖುಷಿ, ಸಂಭ್ರಮದಿಂದ ಭಾಗವಹಿಸುವ ಉತ್ಸವ. ಆದರೆ ಈ ಬಾರಿ ಕೊರೋನಾದಿಂದಾಗಿ ಎರಡೂ ದಿನಗಳಂದು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಆದರೆ ಭಕ್ತರು ನಿರಾಶರಾಗಬೇಕಿಲ್ಲ. ಭಕ್ತರಿಗಾಗಿ ಅಷ್ಠಮಿಯ ಪ್ರಸಾದ ಉಂಡೆ ಚಕ್ಕುಲಿ ಸಿದ್ಧಗೊಂಡಿವೆ.ಈ ಬಾರಿ ತಲಾ ಒಂದು ಲಕ್ಷದಷ್ಟು ಉಂಡೆ ಚಕ್ಕುಲಿ ತಯಾರಿಸಲಾಗಿದೆ. ಆದರೆ ಭಕ್ತರು ಇದನ್ನು ನೇರವಾಗಿ ಬಂದು ಪಡೆಯುವಂತಿಲ್ಲ. ಭಕ್ತಾಧಿಗಳಿಗೆ ಭಾಗವಹಿಸಲು ಸಾಧ್ಯವಾಗದಿರು ವುದರಿಂದ, ಪರ್ಯಾಯ ಶ್ರೀಗಳ ಆಶಯದಂತೆ ಸಾಧ್ಯವಾದಷ್ಟು ಮಂದಿಗೆ ಕೃಷ್ಣ ಪ್ರಸಾದ ವಿತರಣೆ ನಡೆಯಲಿದೆ. ಮಠದ ಸಿಬ್ಬಂದಿ ಪ್ರಸಾದ ವಿತರಿಸಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ.
ಉಡುಪಿಯಲ್ಲಿ ಗುರುವಾರ ಶೃದ್ಧಾಭಕ್ತಿಯೊಂದಿಗೆ ಉಪವಾಸವಿದ್ದು, ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಮಧ್ಯರಾತ್ರಿಯ ಸುಮಾರಿಗೆ ಅರ್ಘ್ಯಪ್ರದಾನ ನಡೆಯಲಿದೆ. ಮರುದಿನ ರಥಬೀದಿಯಲ್ಲಿ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ. ಆದರೆ ಕೋವಿಡ್-19ರ ಹಿಂದಿನ ಎಲ್ಲಾ ಸೂಚನೆ ಗಳನ್ನು ಇಲ್ಲಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಈಗಾಗಲೇ ತಿಳಿಸಿದ್ದಾರೆ.
ಇದರಿಂದ ಈ ಬಾರಿಯ ಎಲ್ಲಾ ಉತ್ಸವಗಳು ಸಾಂಪ್ರದಾಯಿಕ ರೀತಿಯಲ್ಲಿ ನಡೆಯಬೇಕಿದೆ. ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಆಚರಣೆಯಲ್ಲಿ ಸಾರ್ವಜನಿಕರಿಗೆ ಭಾಗಿಯಾಗುವ ಅವಕಾಶ ಇಲ್ಲ. ಸರಕಾರದ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲಿಸುವುದಾಗಿ ಸ್ವಾಮೀಜಿ ಈಗಾಗಲೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಶುಕ್ರವಾರ ಅಪರಾಹ್ನ ರಥಬೀದಿಯಲ್ಲಿ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿದೆ.
ಕೃಷ್ಣ ಮಠಕ್ಕೆ ಬರುವ ಎಲ್ಲಾ ಸಾರ್ವಜನಿಕ ರಸ್ತೆಗಳನ್ನು ಬಂದ್ ಮಾಡುವುದರಿಂದ ಸಾರ್ವಜನಿಕರು ಬರಲು ಸಾಧ್ಯವಾಗದು. ಅಷ್ಟಮಿ ಮತ್ತು ವಿಟ್ಲಪಿಂಡಿಯ ದಿನದಂದು ಯಾವುದೇ ವೇಷಗಳಿಗೆ ಅವಕಾಶ ಇಲ್ಲ. ಕೇವಲ ಮಠದ ಸಿಬ್ಬಂದಿ ಮೊಸರು ಕುಡಿಕೆಯನ್ನು ಸಾಂಪ್ರದಾಯಕವಾಗಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.