ಜನಪ್ರತಿನಿಧಿಗಳ ಪ್ರಕರಣ ಹಿಂತೆಗೆತ ನಿರ್ಧಾರ ಕಾನೂನುಬಾಹಿರ: ಜೆ.ಆರ್. ಲೋಬೊ
ಮಂಗಳೂರು, ಸೆ.10: ಶಾಸಕರು, ಸಂಸದರು ಸೇರಿದಂತೆ ಬಿಜೆಪಿಯ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದು ಕೊಳ್ಳಲು ಬಿಜೆಪಿ ಸರಕಾರ ಕೈಗೊಂಡಿರುವ ನಿರ್ಧಾರ ನಿಯಮಬಾಹಿರವಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿಯ ಕೆಲವು ಶಾಸಕರು, ಸಂಸದರ ಮೇಲೆ ದಾಖಲಾಗಿರುವ 62 ಕ್ರಿಮಿನಲ್ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಇತ್ತೀಚೆಗೆ ಜರಗಿದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದು ಕಾನೂನು ಬಾಹಿರ ಎಂದರು.
ಇದರಲ್ಲಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಸಂಸದ ಪ್ರತಾಪ ಸಿಂಹ, ಸಚಿವರಾದ ಸಿ.ಟಿ.ರವಿ, ಬಿ.ಸಿ.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳೂ ಸೇರಿವೆ . ಇದಕ್ಕೆ ಡೈರೆಕ್ಟರೇಟ್ ಆಫ್ ಪ್ರಾಸಿಕ್ಯೂಸನ್ ಹಾಗೂ ಪೊಲೀಸ್ ಇಲಾಖೆಯ ಸ್ಪಷ್ಟ ವಿರೋಧವಿದ್ದರೂ ಇದನ್ನು ಪರಿಗಣಿಸದೆ ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸು ಆಧರಿಸಿ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.
ಸಾರ್ವಜನಿಕ ಹಿತಾಸಕ್ತಿ ಹಾಗೂ ನ್ಯಾಯಾಲಯದಲ್ಲಿ ಪ್ರಸ್ತುತ ಇರುವ ಮೊಕದ್ದಮೆಗಳ ಒತ್ತಡವನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವರು ಪ್ರಕರಣಗಳ ಹಿಂದೆಗತಕ್ಕೆ ಕಾರಣ ನೀಡಿದ್ದಾರೆ. ಸಚಿವರ ನೀಡಿರುವ ಈ ಕಾರಣಗಳು ಹಾಸ್ಯಾಸ್ಪದ ಎಂದವರು ಹೇಳಿದರು.
ಯಾರೂ ತಪ್ಪು ಮಾಡಿದರೂ ಅದು ನ್ಯಾಯಾಲಯ ವ್ಯವಸ್ಥೆಯಲ್ಲಿ ಇತ್ಯರ್ಥವಾಗಬೇಕು. ಜನಪ್ರತಿನಿಧಿಗಳು ತಮ್ಮ ಮೇಲೆ ಇರುವ ಮೊಕದ್ದಮೆಗಳಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸಿ ಅದರಲ್ಲಿ ನಿರಪರಾಧಿ ಎಂಬುದಾಗಿ ಸಾಬೀತುಪಡಿಸಿ ದೋಷಮುಕ್ತರಾಗಲಿ. ಪ್ರಕರಣಗಳನ್ನು ಹಿಂತೆಗೆತಕ್ಕೆ ನ್ಯಾಯಾಂಗ ವ್ಯವಸ್ಥೆ ಅವಕಾಶ ನೀಡದು ಹಾಗೂ ನ್ಯಾಯಾಲಯದಲ್ಲಿ ಬಿಜೆಪಿ ಸರಕಾರಕ್ಕೆ ಹಿನ್ನಡೆಯಾಗಲಿದೆ ಎಂಬುದು ನಮ್ಮ ವಿಶ್ವಾಸವಾಗಿದೆ ಎಂದವರು ಹೇಳಿದರು.
ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಬಿ. ಇಬ್ರಾಹಿಂ ಅವರು ಮಾತನಾಡಿ ಸರಕಾರ ನಿಯಮಗಳನ್ನು ಮೀರಿ ಈ ರೀತಿ ಯಾಗಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಹೊರಟಿರುವುದು ಖಂಡನೀಯ ಎಂದರು.
ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ ,ಸದಾಶಿವ ಉಳ್ಳಾಲ್, ಸಲೀಂ, ವಿಶ್ವಾಸ್ದಾಸ್, ಶುಭೋದಯ ಆಳ್ವ, ಟಿ.ಕೆ.ಸುಧೀರ್, ಎ.ಸಿ. ವಿನಯರಾಜ್, ನೀರಜ್ಪಾಲ್, ರಮಾನಂದ ಪೂಜಾರಿ ಉಪಸ್ಥಿತರಿದ್ದರು.