'ಐದೂವರೆ ವರ್ಷಗಳಿಂದ ಉಡುಪಿ ಜಿಲ್ಲೆಗೆ ಕೇಳಿಸದ ಆಕಾಶವಾಣಿ' : ರೇಡಿಯೋ ಕೇಳುಗರ ಸಂಘದಿಂದ ಪಿಎಂಗೆ ಅಂಚೆ ಕಾರ್ಡ್ ಚಳವಳಿ
ಉಡುಪಿ, ಸೆ.10: ಆಕಾಶವಾಣಿ ಮಂಗಳೂರು ನಿಲಯದ ಬ್ರಹ್ಮಾವರ ಉಪ ಕೇಂದ್ರದ ಟವರ್ ದುರಸ್ಥಿ ಮಾಡುವಂತೆ ಆಗ್ರಹಿಸಿ ಬೈಂದೂರು ತಾಲೂಕು ಮರವಂತೆ ರೇಡಿಯೋ ಕೇಳುಗರ ಸಂಘ ಪ್ರಧಾನ ಮಂತ್ರಿಗೆ ಕಾರ್ಡ್ ರವಾ ನಿಸುವ ಅಂಚೆ ಚಳವಳಿಯನ್ನು ಆರಂಭಿಸಿದೆ.
ಆಕಾಶವಾಣಿ ಬ್ರಹ್ಮಾವರ ಉಪಕೇಂದ್ರದ ಟವರ್ 2015ರ ಎಪ್ರಿಲ್ 21ರಂದು ಬಿದ್ದು ಹೋಗಿದ್ದು, ಕಳೆದ ಐದೂವರೆ ವರ್ಷಗಳಿಂದ ಈ ಟವರ್ ಇನ್ನೂ ದುರಸ್ತಿಗೊಂಡಿಲ್ಲ. ಇದರಿಂದ ಮುಲ್ಕಿಯಿಂದ ಶಿರೂರುವರೆಗೆ ಸಾವಿ ರಾರು ಮಂದಿ ರೇಡಿಯೋ ಕೇಳುಗರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಈವರೆಗೆ ಯಾರು ಕೂಡ ಸ್ಪಂದಿಸಿಲ್ಲ ಎಂದು ಸಂಘದ ಅಧ್ಯಕ್ಷ ಮರವಂತೆ ಪ್ರಕಾಶ ಪಡಿಯಾರ್ ದೂರಿದ್ದಾರೆ.
2019ರ ಎ.3ರಂದು ಮರವಂತೆ ಸಾಧನಾ ಸಮಾಜಸೇವಾ ವೇದಿಕೆಯ ಮೂಲಕ ಪ್ರಧಾನ ಮಂತ್ರಿಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ಪ್ರಧಾನ ಮಂತ್ರಿ ಗಳ ಕಚೇರಿಯಿಂದ 2019ರ ಎ.29ರಂದು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿ ಕೊಳ್ಳಲಾಯಿತು. ಆದರೆ ಆ ಸಮಸ್ಯೆ ಮಾತ್ರ ಈತನಕ ಪರಿಹಾರ ಕಾಣಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಚೆ ಕಾರ್ಡ್ ಚಳ ವಳಿಯನ್ನು ಆರಂಭಿಸಲಾಗಿದೆ. ಮೊದಲ ಅಂಚೆ ಕಾರ್ಡ್ನ್ನು ಉಡುಪಿ ಜಿಲ್ಲಾ ಕಸಾಪ ಸ್ಥಾಪಕ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಪ್ರಧಾನ ಮಂತ್ರಿಗೆ ರವಾನಿಸಿ ದ್ದಾರೆ. ಇದಕ್ಕೆ ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಬೇಕು. ಅಂಚೆ ಕಾರ್ಡಿನ ಪ್ರತಿಯೊಂದನ್ನು ರೇಡಿಯೊ ಕೇಳುಗರ ಸಂಘಕ್ಕೂ ಕಳುಹಿಸುವಂತೆ ಪ್ರಕಾಶ್ ಪಡಿಯಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.







