ಉಡುಪಿ: ಕೃಷ್ಣಮಠದಲ್ಲಿ ಯಕ್ಷಾಷ್ಟಾಹ ಸಮಾರೋಪ
ಉಡುಪಿ, ಸೆ.10:ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಸಂಯೋಜಿಸಿರುವ ಯಕ್ಷಾಷ್ಟಾಹದ ಸಮಾರೋಪ ಸಮಾರಂಭ ಬುಧವಾರ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯತೀರ್ಥರು ಮಾತನಾಡಿ, 64 ವಿಧದ ಕಲೆಗಳನ್ನು ಸೃಷ್ಟಿಸಿ ನಮಗೆ ನೀಡಿದವನು ಶ್ರೀಕೃಷ್ಣ. ಅಷ್ಟ ಸಂಖ್ಯೆಯ ಇಷ್ಟ ಪ್ರಿಯನಾದ ಶ್ರೀಕೃಷ್ಣನ ಜನ್ಮಾಷ್ಟಮಿಯ ಸಂದರ್ಭದಲ್ಲಿ ಅಷ್ಠದಿನಗಳ ಯಕ್ಷಗಾನ ಕಲೆಯನ್ನು ಅರ್ಪಿಸಿದ ಧಾರೇಶ್ವರ ಮತ್ತು ಬಳಗವನ್ನು ಅಭಿನಂದಿಸಿದರು.
ಪರ್ಯಾಯ ಶ್ರೀಈಶಪ್ರಿಯತೀರ್ಥರು ಮಾತನಾಡಿ, ಪುಸ್ತಕಗಳನ್ನು ಓದದವರಿಗೆ, ಗ್ರಂಥಗಳನ್ನು ತಿಳಿಯದವರಿಗೆ ದೇವರ ಮಹಾತ್ಮೆಗಳನ್ನು ಯಕ್ಷಗಾನ ಕಲೆಯ ಮುಖಾಂತರ ಜನರಿಗೆ ತಲುಪಿಸುವಲ್ಲಿ ವಿಶೇಷ ಸಾಧನೆ ಮಾಡಿದ ಕಲಾವಿದರಿಗೆ ಕೃಷ್ಣಾನುಗ್ರಹವಿರಲಿ ಎಂದು ಅನುಗ್ರಹ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ತಲ್ಲೂರು ಶಿವರಾಮ ಶೆಟ್ಟಿ, ಇಂದ್ರಾಳಿ ಜಯಕಾರ ಶೆಟ್ಟಿ, ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟಿನ ಸುಬ್ರಹ್ಮಣ್ಯ ಧಾರೇಶ್ವರ ಮೊದಲಾದವರು ಉಪಸ್ಥಿತರಿದ್ದರು.