ಉಡುಪಿ: ಸರಳವಾಗಿ ನಡೆದ ಕೃಷ್ಣ ಜನ್ಮಾಷ್ಟಮಿ
ಉಡುಪಿ, ಸೆ.10: ಪ್ರತಿ ವರ್ಷ ಅದ್ದೂರಿಯಾಗಿ, ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಭಾರೀ ಜನರ ಭಾಗವಹಿಸುವಿಕೆಯಲ್ಲಿ ನಡೆಯುತಿದ್ದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಈ ಬಾರಿ ಕೊರೋನದ ಕಾರಣದಿಂದ ಅತ್ಯಂತ ಸರಳವಾಗಿ ಸಂಪ್ರದಾಯಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿ ಸಂಪನ್ನಗೊಂಡಿತು.
ಬೆಳಗ್ಗೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥರು ಶ್ರೀಕೃಷ್ಣನಿಗೆ ‘ತೊಟ್ಟಿಲಲ್ಲಿ ಬಾಲಕೃಷ್ಣ ’ ಅಲಂಕಾರ ಮಾಡಿದರು. ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಿದರು.
ಬಳಿಕ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಪ್ರಯುಕ್ತ ರಾತ್ರಿ ದೇವರ ವಿಶೇಷ ಪೂಜೆಗಾಗಿ ಲಡ್ಡು ತಯಾರಿಸಲು ಪರ್ಯಾಯ ಅದಮಾರು ಶ್ರೀಗಳು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು, ಕಾಣಿಯೂರು ಶ್ರೀಗಳು ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ಚಾಲನೆ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10:30ರಿಂದ ದಾಮೋದರ ಸೇರಿಗಾರ್ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ ಕಚೇರಿ ಹಾಗೂ ಪಾವನ ಬಿ.ಆಚಾರ್ಯ ರಿಂದ ವೀಣಾ ವಾದನ ಕಚೇರಿಗಳು ನಡೆದವು. ಸಂಜೆಯ ವೇಳೆ ಅದಮಾರು ಮಠದ ಯತಿ ದ್ವಯರು ಹಾಗೂ ಪಲಿಮಾರು ಮಠಾಧೀಶರಿಂದ ಪ್ರವಚನ ಮಾಲಿಕೆ ಕಾರ್ಯಕ್ರಮ ಹಾಗೂ ಸಮಾರೋಪಗಳು ನಡೆದವು.
ರಾತ್ರಿ 7:30ರಿಂದ ರಾಜಾಂಗಣದಲ್ಲಿ ಸಂಸ್ಕೃತ ಯಕ್ಷಗಾನ ತಾಳಮದ್ದಲೆ ‘ಶ್ರೀಕೃಷ್ಣಾವತರಣಮ್’, ಬಳಿಕ ಸಾರ್ಯಶಾಲೆಯಲ್ಲಿ ಮಧ್ಯರಾತ್ರಿಯ ವರಿಗೆ ಶಿವಮೊಗ್ಗದ ಕೆ.ಎಂ.ಮಣಿ ಮತ್ತು ಬಳಗದಿಂದ ನಾದಸ್ವರ ವಾದನ ಕಚೇರಿಯೂ ನಡೆದವು.
ಮಧ್ಯರಾತ್ರಿ ಕಳೆದು 12:16ಕ್ಕೆ ಸರಿಯಾಗಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥರು ಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಕೃಷ್ಣನಿಗಾಗಿ ತಯಾರಿಸಿದ ಉಂಡೆ, ಚಕ್ಕುಲಿಯನ್ನು ನೆರೆದವರಿಗೆ ವಿತರಿಸಲಾಯಿತು.
ಶುಕ್ರವಾರ ಸಾಂಪ್ರದಾಯಿಕ ಮೊಸರುಕುಡಿಕೆ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆಯಾದ ವಿಟ್ಲಪಿಂಡಿ ಅಥವಾ ಮೊಸರುಕುಡಿಕೆ ಅತ್ಯಂತ ಸರಳವಾಗಿ ಸಾಂಪ್ರದಾಯಿಕ ರೀತಿಯಲ್ಲಿ ಮಠಕ್ಕೆ ಸಂಬಂಧಿಸಿದವರ ಭಾಗವಹಿಸು ವಿಕೆಯಲ್ಲಿ ಶುಕ್ರವಾರ ಅಪರಾಹ್ನ 3 ರಿಂದ ರಥಬೀದಿಯಲ್ಲಿ ನಡೆಯಲಿದೆ. ಇದಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಈ ವೇಳೆ ಉತ್ಸವ ಮೂರ್ತಿ ಯಾಗಿ ವಿಶೇಷವಾಗಿ ತಯಾರಿಸಿದ ಶ್ರೀಕೃಷ್ಣನ ಮೃಣ್ಮಯಿ ಮೂರ್ತಿಯನ್ನು ಬಳಸಲಾಗುತ್ತದೆ.
ನಾಳೆ ರಾಜಾಂಗಣದಲ್ಲಿ ಬೆಳಗ್ಗೆ 8 ರಿಂದ ಸತತವಾಗಿ ಪ್ರಶಾಂತ್ ಜೋಗಿ ಸಜೀಪ ಇವರ ನಾದಸ್ವರ ವಾದನ, ಮಾಧವ ಶಿವಪುರ ಇವರ ಮುಖವೀಣೆ, ಅಲೆವೂರು ರಾಘವ ಸೇರಿಗಾರ್, ಶ್ರೀನಿವಾಸ ಪೆರ್ಡೂರು, ಅಲೆವೂರು ಉದಯ ಸೇರಿಗಾರ್ ಇವರಿಂದ ನಾದಸ್ವರ ವಾದನ ಹಾಗೂ ಶಂತನು ಉಡುಪಿ ಇವರಿಂದ ಕೊಳಲು ವಾದನ ನಡೆಯಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಇಂದು ಶ್ರೀಕೃಷ್ಣ ಮಠವನ್ನು ವಿವಿಧ ಬಗೆಯ,. ಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು.ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ ವಾಗಿದ್ದರಿಂದ ಕೇವಲ ಮಠಕ್ಕೆ ಸಂಬಂಧಿಸಿದವರು ಮಾತ್ರ ಇದರಲ್ಲಿ ಪಾಲ್ಗೊಂಡರು.