ಮೀನುಗಾರಿಕಾ ವಿವಿ: ರಾಷ್ಟ್ರೀಯ ವಿಚಾರ ಮಂಡನೆಯ ಮೊದಲ ವೆಬಿನಾರ್
ಮಂಗಳೂರು, ಸೆ.10: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ಆನ್ಲೈನ್ನಲ್ಲಿ ಆ್ಯಪ್ವೊಂದರ ಮೂಲಕ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಂಡಿತ್ತು.
ಇಡೀ ವಿಶ್ವವು ಕೋವಿಡ್-19ರ ಭೀತಿಯಿಂದ ತತ್ತರಿಸುತ್ತಿರುವ ಇಂತಹ ಸಂದರ್ಭದಲ್ಲಿ ಸಮಾರಂಭಗಳನ್ನು ನಡೆಸಲು ಅಡಚಣೆ ಮಾಡಿದೆ. ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲನೆಯ ಅಂತರ್ಜಾಲದ ಆನ್ಲೈನ್ ಮೂಲಕ ರಾಷ್ಟ್ರೀಯ ವಿಚಾರ ಮಂಡನೆಯ ವೆಬಿನಾರ್ನ್ನು ಶಿಕ್ಷಕರ ದಿನಾಚಾರಣೆಯ ದಿನದಂದು ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ನಡೆಸಿರುವುದು ವಿಶೇಷವಾಗಿದೆ.
ಭಾರತರತ್ನ ಪ್ರೊ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಕುಲಸಚಿವ ಪ್ರೊ.ಕೆ.ಸಿ. ವೀರಣ್ಣ ಪುಷ್ಪಾರ್ಚನೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುಲಪತಿ ಪ್ರೊ.ಎಚ್.ಡಿ. ನಾರಾಯಣಸ್ವಾಮಿ ಮಾತನಾಡಿ, ಗುರು-ಶಿಷ್ಯರ ಸಂಬಂಧ ಭದ್ರವಾಗಿರಬೇಕಾದರೆ ವಿದ್ಯಾರ್ಥಿಯಾದಾಗ ಕಲಿತ ವಿದ್ಯೆ ಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲಿತ ವಿದ್ಯೆ, ಕಲಿಸಿದ ಗುರು ಮತ್ತು ಗುರುಕುಲದ ಚರಿತ್ರೆಯನ್ನು ಮೆಲುಕು ಹಾಕಿದರೆ ಶಿಕ್ಷಣದಿಂದ ಪಡೆದ ಜ್ಞಾನವೇ ನಾವೆಲ್ಲರು ಗಳಿಸಿದ ಆಸ್ತಿ ಎಂದರು.
ಗೌರವಾನ್ವಿತ ಅತಿಥಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್. ರಾಜೇಂದ್ರ ಪ್ರಸಾದ್ ತಮ್ಮ ವಿಚಾರ ಮಂಡಿಸಿದರು. ಉನ್ನತ ಶಿಕ್ಷಣದಲ್ಲಿ ಇಂದಿನ ತಲೆಮಾರಿನ ಶಿಕ್ಷಕರ ಆದ್ಯತೆ ಕುರಿತು ವಿಶ್ಲೇಷಿಸಿದರು. ಕೊರೋನ ಮಹಾಮಾರಿ ವೈರಾಣುವಿನಿಂದ ಶಾಲಾ-ಕಾಲೇಜುಗಳ ಕಾರ್ಯ ಸ್ಥಗಿತವಾಗಿರುವ ಈ ಸಂದರ್ಭದಲ್ಲಿ ನೂತನ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಪಾಠ-ಪ್ರವಚನ ಮಾಡುವ ಕರ್ತವ್ಯ ಶಿಕ್ಷಕರ ಮೇಲಿದೆ ಎಂದರು.
ಸಂಪನ್ಮೂಲ ಅತಿಥಿ ಪೂದುಛೇರಿಯ ರಾಜೀವ್ ಗಾಂಧಿ ಪಶುವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಪ್ರೊ.ಎಸ್. ರಾಮ ಕುಮಾರ್ ಮಾತನಾಡಿ, ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಗಳ ಬದಲಾವಣೆಯ ದೃಷ್ಟಿಕೋನ ಅನಿವಾರ್ಯವಿದೆ. ಆಧುನಿಕ ಜಗತ್ತಿನಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಮೂರು ವಿಷಯಗಳ ಅದ್ಯಯನ ಅವಶ್ಯಕವಾದುದು ಎಂದು ನುಡಿದರು.
ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನಲ್ಲಿ ವೃತ್ತಿಯಲ್ಲಿರುವ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಎಚ್.ಸಿ. ಇಂದ್ರೇಶ್ ಮಾತನಾಡಿ, ಇಂಜಿನಿಯರ್ ತನ್ನ ವೃತ್ತಿಯಲ್ಲಿ ಯಾಮಾರಿದರೆ ಒಂದೆರಡು ಕಟ್ಟಡಗಳು ಬಿರುಕಾಗಬಹುದು. ಡಾಕ್ಟರ್ ತನ್ನ ಪ್ರರಿಶ್ರಮ ದಲ್ಲಿ ನಿರ್ಲಕ್ಷಿಸಿದರೆ ಜೀವಗಳು ಹೋಗಬಹುದು. ಆದರೆ ಶಿಕ್ಷಕ ತನ್ನ ಜವಾಬ್ದಾರಿಯಲ್ಲಿ ಹಿಂದುಳಿದರೆ ಇಡೀ ಸಮಾಜವೇ ಹಾಳಾಗುವುದರಲ್ಲಿ ಸಂಶಯವಿಲ್ಲ ಎಂದರು.
ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಎ.ಟಿ. ರಾಮಚಂದ್ರ ನಾಯ್ಕ ಅಂತರ್ಜಾಲದ ಝೂಮ್ ಕ್ಲವ್ಡ್ ಆ್ಯಪ್ನ ಆನ್ಲೈನ್ ಮತ್ತು ಯೂಟ್ಯೂಬ್ನ ಕೊಂಡಿಯ ಮೂಲಕ ವೆಬಿನಾರ್ಗೆ ಸೇರ್ಪಡೆಯಾದ ಎಲ್ಲ ಅತಿಥಿ ಗಳು ಹಾಗೂ ಆಹ್ವಾನಿತರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ ಜೀವಿತಾ ಎಸ್. ಪ್ರಾರ್ಥಿಸಿದರು. ಹಾಸನದ ಪಶುವೈದ್ಯಕೀಯ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಘದ ಉಪಾಧ್ಯಕ್ಷ ಡಾ.ಬಿ.ಸಿ. ಗಿರೀಶ್ ನಿರೂಪಿಸಿದರು. ಖಜಾಂಚಿ ಪ್ರೊ.ಎಸ್. ಗಂಗಾನಾಯ್ಕ ವಂದಿಸಿದರು.
ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು, ವಿಸ್ತರಣಾ ನಿರ್ದೇಶಕರು, ಸ್ನಾತಕೋತ್ತರ ಶಿಕ್ಷಣ ನಿರ್ದೇಶಕರು, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು, ಪರೀಕ್ಷಾ ನಿಯಂತ್ರಣಾಧಿಕಾರಿಗಳು, ವಿಶ್ವವಿದ್ಯಾಲಯದ ಗ್ರಂಥಪಾಲಕರು, ಹಣಕಾಸು ನಿಯಂತ್ರಣಾಧಿಕಾರಿಗಳು, ಆಸ್ತಿ ಅಧಿಕಾರಿ ಗಳು, ಐದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ಗಳು, ಇಬ್ಬರು ಹೈನುವಿಜ್ಞಾನ ಕಾಲೇಜಿನ ಡೀನ್, ಮೀನುಗಾರಿಕಾ ಮಹಾ ವಿದ್ಯಾಲಯದ ಡೀನ್, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕರು, ವಿಶ್ವವಿದ್ಯಾಲಯದ ಅಧೀನದ ರಾಜ್ಯದಲ್ಲಿರುವ ಸಾಕುಪ್ರಾಣಿ, ಹೈನುಗಾರಿಕೆ ಹಾಗೂ ಮೀನುಗಾರಿಕೆ ಸಂಶೋಧನಾ ಕೇಂದ್ರಗಳ ಮುಖ್ಯಸ್ಥರು, ವಿಸ್ತರಣಾ ಶಿಕ್ಷಣ ಘಟಕಗಳ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಶಿಕ್ಷಕರ ಸಂಘದ ಸದಸ್ಯರ ಪೈಕಿ ಪ್ರಾಧ್ಯಾಪಕರು ಸೇರಿದಂತೆ 100ಕ್ಕೂ ಅಧಿಕ ಮಂದಿ ಕಾರ್ಯಕ್ರಮದದಲ್ಲಿ ಭಾಗವಹಿಸಿದ್ದರು.
ವಿಶ್ವವಿದ್ಯಾಲಯದ ಸುಮಾರು ಎಂಟು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಮತ್ತು ಆಹ್ವಾನಿತರು ಅಂತರ್ಜಾಲದ ಝೂಮ್ ಕ್ಲವ್ಡ್ ಆ್ಯಪ್ನ ವೆಬಿನಾರ್ ದ ನೇರಪ್ರಸಾರಕ್ಕೆ ಸೇರ್ಪಡೆಯಾಗಿ ಕಾರ್ಯಕ್ರಮದ ಪ್ರಯೋಜನ ಪಡೆದರು. ಸರಿ ಸುಮಾರು 452ಕ್ಕೂ ಮಿಗಿಲು ಪ್ರೇಕ್ಷಕರು ಯೂಟ್ಯೂಬ್ನ ಕೊಂಡಿಯ ಮೂಲಕ ವೆಬಿನಾರ್ ನ ನೇರಪ್ರಸಾರ ವೀಕ್ಷಿಸಿದರು.