‘ನವೋದ್ಯಮ ರ್ಯಾಂಕಿಂಗ್’ನಲ್ಲಿ ಕರ್ನಾಟಕ ಅಗ್ರಗಣ್ಯ ಸಾಧಕ: ಡಿಸಿಎಂ ಅಶ್ವತ್ಥ ನಾರಾಯಣ
ಕೇಂದ್ರ ಸರಕಾರದ ರ್ಯಾಂಕಿಂಗ್ ಪ್ರಕಟ

ಬೆಂಗಳೂರು, ಸೆ.11: ರಾಜ್ಯಗಳ ‘ನವೋದ್ಯಮ ರ್ಯಾಂಕಿಂಗ್-2019’ರಲ್ಲಿ ಕರ್ನಾಟಕದ ಎಲೆಕ್ಟ್ರಾನಿಕ್ಟ್, ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ಹಾಗೂ ದೇಶೀಯ ವಹಿವಾಟು ಉತ್ತೇಜನಾ ಇಲಾಖೆಯಿಂದ ‘ಅಗ್ರಗಣ್ಯ ಸಾಧಕ’ ಗೌರವಕ್ಕೆ ಪಾತ್ರವಾಗಿದೆ. ಈ ಮೂಲಕ ಇಲಾಖೆಯು ಸತತ ಎರಡನೇ ಸಲ ಈ ಗೌರವಕ್ಕೆ ಪಾತ್ರವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಈ ರ್ಯಾಂಕಿಂಗ್ ಅನ್ನು 7 ಮೂಲಭೂತ ಅಂಶಗಳು ಹಾಗೂ 30 ಕ್ರಿಯಾ ಅಂಶಗಳ ರೂಪುರೇಷೆ ಆಧಾರದ ಮೇಲೆ ನಿರ್ಧರಿಸಲಾಗಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ನೀಡುವ ಸಾಂಸ್ಥಿಕ ಬೆಂಬಲ, ನಿಬಂಧನೆಗಳ ಸರಳೀಕರಣ, ಪ್ರೋತ್ಸಾಹಕ ಕ್ರಮಗಳು, ಪರಿಪೋಷಕ ಬೆಂಬಲ, ಬೀಜ ಧನ ನೆರವು, ಶೋಧನಾ ನಿಧಿ ನೆರವು, ಜಾಗೃತಿ ಮತ್ತು ಜನಸಂಪರ್ಕ ಕಾರ್ಯಕ್ರಮಗಳು ಮೂಲಭೂತ ಅಂಶಗಳಲ್ಲಿ ಸೇರಿವೆ ಎಂದು ಅವರು ಹೇಳಿದ್ದಾರೆ.
2018ರ ಮೇ 1ರಿಂದ 2019ರ ಸೆಪ್ಟೆಂಬರ್ 30ರ ಅವಧಿಯ ನಡುವೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳನ್ನು ಪರಿಗಣನೆಗೆ ತೆಗೆದುಕೊಂಡು ರ್ಯಾಂಕಿಂಗ್ ಪ್ರಕಟಿಸಲಾಗಿದೆ. ನವೋದ್ಯಮಗಳ ಪರ್ಯಾವರಣವನ್ನು ಬಲಗೊಳಿಸುವ ದಿಸೆಯಲ್ಲಿ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸುವುದು ಈ ರ್ಯಾಂಕಿಂಗ್ನ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯವು ಸಾಂಸ್ಥಿಕ ನಾಯಕತ್ವ, ಪ್ರೋತ್ಸಾಹಕ ಕ್ರಮಗಳು, ನಿಯಂತ್ರಕ ಕ್ರಮಗಳ ಬದಲಾವಣೆ ಹಾಗೂ ಪರಿಪೋಷಕ ವಲಯ (ಇನ್ ಕ್ಯುಬೇಷನ್ ಹಬ್) ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.
ನವೋದ್ಯಮಗಳಿಗೆ ಒತ್ತಾಸೆ ನೀಡಲು ರಾಜ್ಯ ಸರಕಾರವು ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಹೊಸ ಹಾಗೂ ಪ್ರಭಾವಿ ತಾಂತ್ರಿಕತೆಗಳಿಗೆ ನೆರವು ನೀಡಲು ಅನ್ವೇಷಣಾ ಪೂರಕ ನೀತಿಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹೊಸ ತಲೆಮಾರಿನ ತಾಂತ್ರಿಕತೆಗಳಿಗೆ ಸಂಬಂಧಪಟ್ಟಂತೆ ನವೋದ್ಯಮಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪರಿಶೀಲಿಸಲು ನಿಯಂತ್ರಕ ಸಮಿತಿ ರಚಿಸಲಾಗಿದೆ. ನವೋದ್ಯಮಗಳಿಗಾಗಿ ಸಮಗ್ರ ಉದ್ಯಮಶೀಲತಾ ವೇದಿಕೆ ಕಲ್ಪಿಸುವ ಸಲುವಾಗಿ “ಎಲಿವೇಟ್” ಎಂಬ ವಿಶಿಷ್ಟ ಪರಿಕಲ್ಪನೆಯನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ನವೋದ್ಯಮಗಳ ಬೆಳವಣಿಗೆಯನ್ನು ಪೋಷಿಸಲು ಹಾಗೂ ಅದಕ್ಕೆ ವೇಗ ನೀಡಲು ಸರಕಾರವು ಪ್ರಯತ್ನಗಳನ್ನು ಮುಂದುವರಿಸಲಿದೆ. ಡಿಪಿಐಐಟಿಯ ರ್ಯಾಂಕಿಂಗ್ ರೂಪುರೇಷೆಯು ನವೋದ್ಯಮಿಗಳಿಗೆ ಸಮರ್ಥ ಕ್ಷೇತ್ರಗಳನ್ನು ಶೋಧಿಸಲು ಹಾಗೂ ತಳಮಟ್ಟದಲ್ಲಿ ಜನರಿಗೆ ತಲುಪುವಂತಹ ಅನ್ವೇಷಣೆಗಳನ್ನು ತೊಡಗಲು ಪ್ರೇರಕವಾಗಿದೆ ಎಂದು ಅಶ್ವತ್ಥ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







