ಅರಣ್ಯ ಇಲಾಖೆಯ ಸದೃಢತೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ: ಸಚಿವ ಆನಂದ್ ಸಿಂಗ್
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ
![ಅರಣ್ಯ ಇಲಾಖೆಯ ಸದೃಢತೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ: ಸಚಿವ ಆನಂದ್ ಸಿಂಗ್ ಅರಣ್ಯ ಇಲಾಖೆಯ ಸದೃಢತೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ: ಸಚಿವ ಆನಂದ್ ಸಿಂಗ್](https://www.varthabharati.in/sites/default/files/images/articles/2020/09/11/258791-1599846871.jpg)
ಬೆಂಗಳೂರು, ಸೆ.11: ರಾಜ್ಯದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯನ್ನು ಇನ್ನಷ್ಟು ಸದೃಢಗೊಳಿಸಲು ವಿವಿಧ ಹಂತದ ಕ್ಷೇತ್ರ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲು ಸರಕಾರ ಕ್ರಮ ಕೈಗೊಂಡಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಣ್ಯ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಒಟ್ಟು 3,085 ವಿವಿಧ ದರ್ಜೆಯ ಕ್ಷೇತ್ರ ಸಿಬ್ಬಂದಿ ಮತ್ತು ಅಧಿಕಾರಿ ಹುದ್ದೆಗಳನ್ನು 2019-20ನೇ ಸಾಲಿನಿಂದ ಭರ್ತಿ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಅಧಿಕಾರಿಗಳ ಮನೋಸ್ಥೈರ್ಯ ಮತ್ತು ಸ್ಪೂರ್ತಿಯನ್ನು ಹೆಚ್ಚಿಸುವ ಸಲುವಾಗಿ ಪ್ರತಿ ವರ್ಷ ಅಸಾಮಾನ್ಯ ಸೇವೆ ಸಲ್ಲಿಸಿದ ದಕ್ಷ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಗುರುತಿಸಿ ಅವರಿಗೆ ಸರಕಾರದಿಂದ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುವುದೆಂದು ಅವರು ಹೇಳಿದರು.
ಅರಣ್ಯ ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗ ಮರಣ ಹೊಂದಿದರೆ ಈ ಹಿಂದೆ ನೀಡಲಾಗುತ್ತಿದ್ದ 20 ಲಕ್ಷ ರೂ.ಪರಿಹಾರ ಮೊತ್ತವನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ. ಹಾಗೂ ಶಾಶ್ವತ ಅಂಗವಿಕಲತೆ ಉಂಟಾದರೆ 10 ಲಕ್ಷ ರೂ. ಮತ್ತು ಗಂಭೀರ ಸ್ವರೂಪದ ಗಾಯ ಉಂಟಾದಲ್ಲಿ 2 ಲಕ್ಷ ರೂ.ಪರಿಹಾರ ಮೊತ್ತವನ್ನು ನೀಡಲಾಗುತ್ತದೆ. ಹಾಗೂ 10 ಲಕ್ಷ ರೂ.ವಿಶೇಷ ಗುಂಪು ವಿಮಾ ಮೊತ್ತ ಹಾಗೂ ಹಂಗಾಮಿ ನೌಕರರಿಗೆ ವಿಶೇಷ ಗುಂಪು ವಿಮಾ ಮೊತ್ತ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಹುತಾತ್ಮ ಅರಣ್ಯ ಸಿಬ್ಬಂದಿಗಳ ಕುಟುಂಬಕ್ಕೆ ನೆರವಾಗಲು ಉದ್ದೇಶದಿಂದ ಹುತಾತ್ಮರ ದಿನಾಚರಣೆ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ಸಂಗ್ರಹವಾಗುವ ಹಣವನ್ನು ಅರಣ್ಯ ಹುತಾತ್ಮರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಹಾಗೂ ಇತರೆ ಅರಣ್ಯ ಹುತಾತ್ಮರ ಅವಲಂಬಿತರ ಏಳ್ಗೆಗಾಗಿ ಬಳಸಲಾಗುವುದೆಂದು ಅವರು ತಿಳಿಸಿದರು.
ಅಭಿವೃದ್ಧಿ ವಿಚಾರಕ್ಕೆ ಬಂದಾಗ ಅರಣ್ಯಾಧಿಕಾರಿಗಳು ಅಡ್ಡಿಯಾಗುತ್ತಾರೆ ಎಂಬ ಕಲ್ಪನೆ ಆನೇಕರಲ್ಲಿದೆ. ಆದರೆ, ಅರಣ್ಯದೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಂಡಿರುವ ಅಧಿಕಾರಿಗಳು ಅರಣ್ಯವನ್ನು ಉಳಿಸುವ ಮನಸ್ಥಿತಿ ಹೊಂದಿರುತ್ತಾರೆಯೇ ವಿನಃ ಅಭಿವೃದ್ಧಿಗೆ ಅಡ್ಡಿ ಮಾಡುವ ಉದ್ದೇಶವಿರುವುದಿಲ್ಲ. ಮುಂದಿನ ದಿನಗಳಲ್ಲಿ ಅರಣ್ಯ ರಕ್ಷಣೆಯ ಜತೆಗೆ ಅಭಿವೃದ್ದಿಗೂ ಆದ್ಯತೆ ನೀಡಿ ಇತರೆ ಇಲಾಖೆಗಳಿಗೆ ಸಹಕಾರ ನೀಡಬೇಕೆಂದು ಅವರು ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು. ಇದೇ ವೇಳೆ 2002ರಿಂದ 2020ರವರೆಗೆ ಹುತಾತ್ಮರಾದ ಅರಣ್ಯ ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.