ಆಗಾಗ ಟ್ವೀಟ್ ಮಾಡದಿದ್ರೆ ಸಿದ್ದರಾಮಯ್ಯರನ್ನು ಕಾಂಗ್ರೆಸ್ ನವರೇ ಮರೆಯುತ್ತಾರೆ: ಸಚಿವ ಸೋಮಶೇಖರ್

ಮೈಸೂರು,ಸೆ.12: ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಆಗಾಗ ಟ್ವೀಟ್ ಮಾಡದಿದ್ರೆ ಕಾಂಗ್ರೆಸ್ ನವರೇ ಅವರನ್ನು ಮರೆತು ಬಿಡುತ್ತಾರೆ. ಆ ಕಾರಣಕ್ಕೆ ಸಿದ್ದರಾಮಯ್ಯ ಆಗೊಂದು ಈಗೊಂದು ಟ್ವೀಟ್ ಮಾಡುತ್ತಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಕಾಂಗ್ರೆಸ್ ಮಾಡುತ್ತಿರುವ 'ನಿದ್ದೆಯಿಂದ ಎದ್ದೇಳು ಸರ್ಕಾರ ಅಭಿಯಾನ' ಕುರಿತು ಪ್ರತಿಕ್ರಿಯಿಸಿದ ಸಚಿವರು, ನಿದ್ದೆಯಲ್ಲಿರುವವರು ನಾವಲ್ಲ. ಸಿದ್ದರಾಮಯ್ಯ ಇಷ್ಟು ದಿನ ಮಲಗಿದ್ದರು. ಯಡಿಯೂರಪ್ಪ ವರ್ಸಸ್ ಸಿದ್ದರಾಮಯ್ಯ ದಿನಚರಿ ಜನರ ಮುಂದಿಡೋಣ. 5 ವರ್ಷದಲ್ಲಿ ಸಿದ್ದರಾಮಯ್ಯ ಮಾಡಿದ್ದು ಏನು? ಯಡಿಯೂರಪ್ಪ ಕೋವಿಡ್ ಕಾಲದಲ್ಲಿ ಮಾಡುತ್ತಿರುವುದು ಏನು ಎಂಬುದು ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು.
ಯಾರೋ ಬಂದು ತಿವಿದಾಗ ಟ್ವೀಟ್ ಮಾಡುವುದು ಸಿದ್ದರಾಮಯ್ಯ ಅವರ ಕೆಲಸವಾಗಿದೆ. ಕಾಂಗ್ರೆಸ್ ಪಕ್ಷದವರೇ ಇವರನ್ನು ಮರೆತು ಬಿಡುತ್ತಾರೆ ಅಂತ ಹೀಗೆ ಟ್ವೀಟ್ ಮಾಡುತ್ತಾರೆ. ಟ್ವೀಟ್ ಮಾಡುವುದು ವಿರೋಧ ಪಕ್ಷದ ಕೆಲಸವಲ್ಲ. ಟ್ವೀಟ್ ಮಾಡುವುದಕ್ಕೆ ವಿರೋಧ ಪಕ್ಷದ ನಾಯಕರಿಗೆ ಸರ್ಕಾರ ಸವಲತ್ತು ಕೊಡಬೇಕಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನಾನು ವಿರೋಧ ಪಕ್ಷದ ನಾಯಕ ಎಂದು ತೋರಿಸಿಕೊಳ್ಳಲು ಟ್ವೀಟ್ ಮಾಡುತ್ತಾರೆ. ಏಕೆಂದರೆ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಿದ್ದರಾಮಯ್ಯಗೆ ಭಯ. ತನ್ನನ್ನು ಪಕ್ಷದವರೇ ಮರೆಯುತ್ತಾರೆ ಅನ್ನೋ ಭಯ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಸಿದ್ದು ಸರಣಿ ಟ್ವೀಟ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಲ್ಪಸಂಖ್ಯಾತ ಶಾಸಕ ಎಂದು ನನ್ನನ್ನು ಟಾರ್ಗೆಟ್ ಎಂಬ ಶಾಸಕ ಝಮೀರ್ ಅಹ್ಮದ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು ಝಮೀರ್ ಗೆ ಗಿಲ್ಟ್ ಕಾಡುತ್ತಿರಬಹುದು. ಅದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ತಪ್ಪು ಮಾಡದಿದ್ದರೆ ಅಲ್ಪಸಂಖ್ಯಾತರ ಹೆಸರು ಏಕೆ ಬಳಸಬೇಕು. ಈ ದೇಶದಲ್ಲಿ ಹಿಂದೂ, ಅಲ್ಪಸಂಖ್ಯಾತ ಎಲ್ಲರಿಗೂ ಒಂದೇ ಕಾನೂನು. ಅವರ ಮೇಲಿನ ಆರೋಪ ಸುಳ್ಳು ಎಂದು ಹೇಳಲಿ. ಅದು ಬಿಟ್ಟು ಪ್ರಚಾರಕ್ಕಾಗಿ ಏನೇನೋ ಹೇಳಿಕೆ ನೀಡಬಾರದು ಎಂದು ಚಾಟಿ ಬೀಸಿದರು.
ಆಡಿದ ಮಾತಿಗೆ ನಡೆದುಕೊಳ್ಳುವರು ಇದ್ದಾರೆ. ಆದರೆ ಇವರು ಆಡಿದ ಮಾತಿನಂತೆ ನಡೆದುಕೊಳ್ಳುತ್ತಾರಾ? ಸರ್ಕಾರ ಇಲ್ಲಿ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ಯಾರನ್ನು ಟಾರ್ಗೆಟ್ ಸಹ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.







