2023ರೊಳಗೆ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ: ಡಿ.ವಿ.ಸದಾನಂದಗೌಡ

ಬೆಂಗಳೂರು, ಸೆ. 12: ಪ್ರಧಾನಿ ಮೋದಿಯವರ ಆಶಯದಂತೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಸಲಹೆ ನೀಡಿದ್ದಾರೆ.
ಶನಿವಾರ ರೈತರು ಮತ್ತು ಸಹಕಾರಿಗಳನ್ನು ಉದ್ದೇಶಿಸಿ ವೆಬಿನಾರ್ ನಲ್ಲಿ ಮಾತನಾಡಿದ ಅವರು, ರೈತರು ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ಮಣ್ಣಿನ ಆರೋಗ್ಯ ಕಾರ್ಡ್ ಮುಖಾಂತರ ಯಾವ ಭೂಮಿಗೆ ಯಾವ ಪೋಷಕಾಂಶದ ಅವಶ್ಯಕತೆ ಇದೆ ಎಂಬುದನ್ನು ಪತ್ತೆ ಮಾಡಿ, ರಸ ಗೊಬ್ಬರಗಳನ್ನು ಬಳಕೆ ಮಾಡಬೇಕು. ಇದರಿಂದಾಗಿ ಅನವಶ್ಯಕವಾಗಿ ಬಳಸುವ ರಸಗೊಬ್ಬರಗಳನ್ನು ಕಡಿಮೆ ಮಾಡಬಹುದು ಎಂದರು.
ರಸಗೊಬ್ಬರಗಳ ಬಳಕೆಯ ಬದಲು ಸಾವಯವ ಹಾಗೂ ನ್ಯಾನೋ ಗೊಬ್ಬರ ಬಳಸುವುದರಿಂದ ರೈತರಿಗೆ ಖರ್ಚು ಕಡಿಮೆ ಹಾಗೂ ಮಣ್ಣಿ ಆರೋಗ್ಯ ಹೆಚ್ಚುತ್ತದೆ. ಈ ಗೊಬ್ಬರ ವಿಧಾನಕ್ಕೆ ಹೆಚ್ಚು ಪ್ರೋತ್ಸಾಹ ನೀಡುವಂತೆ ಮೋದಿಯವರು ಸೂಚಿಸಿದ್ದಾರೆ. ಆತ್ಮನಿರ್ಭರ ದೃಷ್ಟಿಕೋನಕ್ಕೆ ತಕ್ಕಂತೆ ರಸಗೊಬ್ಬರಗಳ ಉತ್ಪಾದನೆಯನ್ನು ದೇಶೀಯವಾಗಿ ಹೆಚ್ಚಿಸಲು ಮತ್ತು ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಲು ಇಫ್ಕೋ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.
2023ರ ವೇಳೆಗೆ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಪ್ರಧಾನಿಯವರು ಸೂಚನೆ ಕೊಟ್ಟಿದ್ದಾರೆ. ಪ್ರಸ್ತುತ ಶೇ.70ರಷ್ಟು ರಸಗೊಬ್ಬರ ದೇಶೀಯವಾಗಿ ಉತ್ಪಾದನೆಯಾಗುತ್ತಿದ್ದು ಉಳಿದ ಶೇ.30ರಷ್ಟು ರಸಗೊಬ್ಬರವೂ ದೇಶೀಯವಾಗಿಯೇ ಉತ್ಪಾದನೆಯಾಗುವತ್ತ ಗಮನ ಕೇಂದ್ರೀಕರಿಸಿದ್ದು, ಸ್ಥಗಿತಗೊಂಡಿದ್ದ ನಾಲ್ಕು ರಸಗೊಬ್ಬರ ಉತ್ಪಾದನಾ ಘಟಕಗಳನ್ನು 40ಸಾವಿರ ಕೋಟಿ ರೂ.ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ಸದಾನಂದಗೌಡ ತಿಳಿಸಿದರು.
`ಸ್ಥಳೀಯತೆಗೆ ಆದ್ಯತೆ' ಎನ್ನುವ ಮೋದಿಯವರ ಅಪೇಕ್ಷೆಗೆ ಅನುಗುಣವಾಗಿ ನೈಸರ್ಗಿಕವಾಗಿ ಬೆಳೆಯುವ ಸಮುದ್ರ ಕಳೆಯ ಬೆಳವಣಿಗೆ ಹೆಚ್ಚಿಸುವ `ಸಾಗರಿಕಾ', ಜೈವಿಕ ಗೊಬ್ಬರಗಳು, ನೀಮ್ ಕೇಕ್, ಜೈವಿಕ ಕ್ರಿಮಿನಾಶಕಗಳು ಮತ್ತು ನೈಸರ್ಗಿಕ ಪೊಟಾಷ್ ಬಳಕೆಯಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಇಫ್ಕೋ ಪ್ರೋತ್ಸಾಹಿಸುತ್ತಿದೆ. ಇದು ಪ್ರಶಂಸನೀಯವಾದುದು ಎಂದ ಅವರು, ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಸರಕಾರದ ಕ್ರಮದ ಭಾಗವಾಗಿ, ಸಂಶೋಧನೆ, ಪರೀಕ್ಷೆ, ತಂತ್ರಜ್ಞಾನ ವರ್ಗಾವಣೆ ಮತ್ತು ದೇಶಾದ್ಯಂತ ಯೋಜನೆಗಳ ವಿಸ್ತರಣೆಗಾಗಿ ಇಫ್ಕೋ ಐಸಿಎಂಆರ್ ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಮಾಡಿದೆ.
ಡಿಜಿಟಲ್ ಇಂಡಿಯಾವನ್ನು ಬೆಂಬಲಿಸಲು, ನಗದು ರಹಿತ ವಹಿವಾಟು ನಡೆಸಲು ರೈತರಿಗಾಗಿ ಡಿಜಿಟಲ್ ವೇದಿಕೆಯನ್ನು ಇಫ್ಕೋ ಆರಂಭಿಸಿದೆ. ಗ್ರಾಮ ಮಟ್ಟದ ಉದ್ಯಮಿಗಳ ಮೂಲಕ ಇಫ್ಕೋ ಮತ್ತು ಸಿಎಸ್ಸಿ(ಸಾಮಾನ್ಯ ಸೇವಾ ಕೇಂದ್ರಗಳು) ಸಹಯೋಗವು ದೇಶದ ಸಣ್ಣ ಮತ್ತು ಅತಿಸಣ್ಣ ರೈತರ ಕೃಷಿ ಅಗತ್ಯಗಳನ್ನು ಪೂರೈಸುತ್ತದೆ. ಉತ್ಪಾದಕತೆ ಮತ್ತು ಮೌಲ್ಯವರ್ಧನೆ ಹೆಚ್ಚಿಸುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಸಾವಯವ ಮೌಲ್ಯ ಸರಪಳಿಯನ್ನು ಸೃಷ್ಟಿಸಲು ಇಫ್ಕೋ `ಸಿಕ್ಕಿಂ ಇಫ್ಕೋ ಆರ್ಗಾನಿಕ್ಸ್' ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ರೋಗದ ನಿಗ್ರಹಕ್ಕಾಗಿ ಇಫ್ಕೋ ದೇಶಾದ್ಯಂತ ಅಭಿಯಾನ ಕೈಗೊಂಡಿದೆ. ಮುಖಗವಸುಗಳು, ಸ್ಯಾನಿಟೈಸರ್, ವಿಟಮಿನ್-ಸಿ ಮಾತ್ರೆಗಳನ್ನು ರೈತ ಸಮುದಾಯಕ್ಕೆ ವಿತರಿಸಿದೆ ಎಂದು ಅವರು ತಿಳಿಸಿದರು. ಇಫ್ಕೋ ಆಯೋಜಿಸಿದ್ದ ವೆಬಿನಾರ್ ನಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಎಸ್.ಅವಸ್ಥಿ ಉಪಸ್ಥಿತರಿದ್ದರು.







