ನಿಟ್ಟೂರು: ಹಳೆವಿದ್ಯಾರ್ಥಿ ಶಿಕ್ಷಕರಿಗೆ ‘ಸುವರ್ಣ ಶಿಕ್ಷಕ ಪುರಸ್ಕಾರ’

ಉಡುಪಿ, ಸೆ.13: ಸುವರ್ಣ ಪರ್ವವನ್ನಾಚರಿಸುತ್ತಿರುವ ನಿಟ್ಟೂರು ಪ್ರೌಢ ಶಾಲೆಯ ವತಿಯಿಂದ ರವಿವಾರ 15 ಮಂದಿ ಶಾಲಾ ಹಳೆವಿದ್ಯಾರ್ಥಿ ಶಿಕ್ಷಕರು ಗಳನ್ನು ಸುವರ್ಣ ಶಿಕ್ಷಕ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಉಡುಪಿ ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್. ಸಾಮಗ ಮಾತನಾಡಿ, ಬಾಲ್ಯದಲ್ಲಿ ಕಳೆದ ಶಾಲಾ ದಿನಗಳನ್ನು ಮೆಲುಕು ಹಾಕುವಾಗ ದೊರೆಯುವ ಆನಂದಕ್ಕೆ ಸರಿಸಮನಾದುದು ಬೇರೆ ಇಲ್ಲ. ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದ ಹಳೆವಿದ್ಯಾರ್ಥಿಗಳನ್ನು ಕಲಿತ ಶಾಲೆಯಲ್ಲಿ ಸಮ್ಮಾನಿಸುವುದು ವಿಶಿಷ್ಟವಾದ ಅನುಭವ ನೀಡುತ್ತದೆ ಎಂದರು.
ಶಾಸಕ ಕೆ.ರಘುಪತಿ ಭಟ್ ಎಲ್ಲ ಶಿಕ್ಷಕರನ್ನು ಗೌರವಿಸಿದರು. ಇದೇ ಸಂದರ್ಭ ದಲ್ಲಿ ಲೆಕ್ಕಪರಿಶೋಧಕ ಸಂಘ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಿಯುಕ್ತಿ ಗೊಂಡ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರದೀಪ್ ಜೋಗಿ ಅವರನ್ನು ಅಭಿನಂದಿಸಲಾಯಿತು. ಒಟ್ಟು 124 ಕೋವಿಡ್ ಮೃತದೇಹಗಳ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡ ಕೊರೋನ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಹಳೆವಿದ್ಯಾರ್ಥಿ ನಾಗಾರ್ಜುನ ಪೂಜಾರಿ ಅವರನ್ನು 10ಸಾವಿರ ರೂ. ನಿಧಿಯೊಂದಿಗೆ ಸಮ್ಮಾನಿಸಲಾಯಿತು.
ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನಿ ಯಾದ ಗ್ರೀಷ್ಮಾಳನ್ನು ನಗದು ಪುರಸ್ಕಾರದೊಂದಿಗೆ ಸಮ್ಮಾನಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಪಿ.ವೇಣುಗೋಪಾಲ ಆಚಾರ್, ಎಸ್.ವಿ. ಭಟ್, ಕೆ.ಸುಬ್ರಹ್ಮಣ್ಯ ಭಟ್, ಭಾಸ್ಕರ ಡಿ.ಸುವರ್ಣ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ ಸ್ವಾಗತಿಸಿದರು. ಎಚ್.ಎನ್ ಶೃಂಗೇಶ್ವರ ಶಿಕ್ಷಕರ ಪರಿಚಯ ಮಾಡಿದರು. ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆವಿದ್ಯಾರ್ಥಿ ಶಶಿಪ್ರಭಾ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ಶಿಕ್ಷಕಿ ಅನಸೂಯ ವಂದಿಸಿದರು.







