ಸೆ.16ರಂದು ರೈತರಿಗಾಗಿ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮಕ್ಕೆ ಚಾಲನೆ: ಎಸ್.ಟಿ.ಸೋಮಶೇಖರ್
![ಸೆ.16ರಂದು ರೈತರಿಗಾಗಿ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮಕ್ಕೆ ಚಾಲನೆ: ಎಸ್.ಟಿ.ಸೋಮಶೇಖರ್ ಸೆ.16ರಂದು ರೈತರಿಗಾಗಿ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮಕ್ಕೆ ಚಾಲನೆ: ಎಸ್.ಟಿ.ಸೋಮಶೇಖರ್](https://www.varthabharati.in/sites/default/files/images/articles/2020/09/14/259217-1600105255.jpg)
ಬೆಂಗಳೂರು, ಸೆ.14: ರೈತರಿಗೆ ಕೃಷಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಆರ್ಥಿಕ ನೆರವು ನೀಡುವುದು, ಮೀನುಗಾರರು ಮತ್ತು ಹೈನುಗಾರರಿಗೆ ಪ್ಯಾಕ್ಗಳ ಮೂಲಕ ದುಡಿಯುವ ಬಂಡವಾಳವನ್ನು ದೊರಕಿಸಿ ಅವರೆಲ್ಲರೂ ಸಹಕಾರ ಕ್ಷೇತ್ರದ ಕಕ್ಷೆಯೊಳಗೆ ಸ್ವಾವಲಂಬನೆ ಸಾಧಿಸಲು ಸಹಕಾರ ಇಲಾಖೆಯ ಮೂಲಕ 4 ಕಂದಾಯ ವಿಭಾಗಗಳಲ್ಲಿ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಪ್ರಥಮ ಹಂತದಲ್ಲಿ ಬೆಂಗಳೂರು ವಿಭಾಗ ಮಟ್ಟದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸೆ.16ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಉದ್ಘಾಟಿಸುತ್ತಿದ್ದಾರೆ. ಈ ಯೋಜನೆಯನ್ವಯ ಕೃಷಿ ಕ್ಷೇತ್ರಕ್ಕೆ 15,300 ಕೋಟಿ ರೂ., ಕೃಷಿಯೇತರ ಕ್ಷೇತ್ರಕ್ಕೆ 24,000 ಕೋಟಿ ರೂ. ಸೇರಿದಂತೆ ಒಟ್ಟಾರೆಯಾಗಿ 39,300 ಕೋಟಿ ರೂ.ವನ್ನು ನೀಡಲಾಗುತ್ತಿದೆ. ಅಗ್ರಿ ಇನ್ಫ್ರಾ ಫಂಡ್ ಅಡಿಯಲ್ಲಿ ಪ್ಯಾಕ್ಸ್ ಗಳಲ್ಲಿ ವಿವಿಧ ಸೇವೆಗಳ ಕೇಂದ್ರಗಳ ಸ್ಥಾಪನೆಗೆ ನಬಾರ್ಡ್ ನಿಂದ 4525 ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ನೀಡಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ಸಹಕಾರ ಇಲಾಖೆಯು ಕೆಎಂಎಫ್ ವತಿಯಿಂದ ವಿಕ್ಟೋರಿಯಾ ಆಸ್ಪತ್ರೆ ಕೊರೋನ ವಾರಿಯರ್ಸ್ಗೆ ನಂದಿನಿ ಸುವಾಸಿತ ಹಾಲನ್ನು ಉಚಿತವಾಗಿ ಒದಗಿಸಿದೆ. ಗ್ರಾಹಕರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಆರ್ಯುವೇದ ಗುಣಗಳಿರುವ ಅರಿಶಿನ ಹಾಲು, ತುಳಸಿ, ಅಶ್ವಗಂಧ, ಕಾಳುಮೆಣಸು, ಲವಂಗ ಮತ್ತು ಶುಂಠಿ ಹಾಲನ್ನು ಮಾರುಕಟ್ಟೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರೈತರು ಪಡೆದ ಬೆಳೆ ಸಾಲವನ್ನು ಪಾವತಿಸಿ ಬಡ್ಡಿ ಸಹಾಯಧನ ಪಡೆಯಲು ಆ.31ರವರೆಗೆ ಕಾಲಾವಕಾಶ ನೀಡಲಾಗಿತ್ತು. ರೈತರು ಪಡೆದ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ಹಾಗೂ ಮಹಿಳೆಯರು ಸ್ವಸಹಾಯ ಸಂಘಗಳಿಂದ ಪಡೆದ ಸಾಲಗಳ ಪೈಕಿ ಪ್ರಸಕ್ತ ಸಾಲಿನ ಮಾ.1ರಿಂದ ಆ.31ರವರೆಗೆ ಪಾವತಿಸಬೇಕಾದ ಕಂತುಗಳನ್ನು ಮುಂದೂಡಲಾಗಿದೆ ಸೋಮಶೇಖರ್ ಹೇಳಿದ್ದಾರೆ.
ಇದರಿಂದ ಸುಮಾರು 9 ಲಕ್ಷ ರೈತರಿಗೆ ಮತ್ತು 40 ಸಾವಿರ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಅನುಕೂಲವಾಗಿದೆ. ರೈತರು ಬೆಳೆದ ಮೆಕ್ಕೆಜೋಳದ ಬೆಲೆ ತೀವ್ರ ಕುಸಿತ ಕಂಡಾಗ, ಕೆಎಂಎಫ್ ಮೂಲಕ ಬೆಂಬಲ ಬೆಲೆಯಲ್ಲಿ 11 ಸಾವಿರ ರೈತರಿಂದ 42 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಖರೀದಿಸಿ ಈವರೆಗೆ 72 ಕೋಟಿ ರೂ.ಗಳನ್ನು ರೈತರಿಗೆ ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್-19ರ ಲಾಕ್ಡೌನ್ ಕಾಲದಲ್ಲಿಯೂ ಸಹಕಾರ ಮಾರಾಟ ಮಹಾಮಂಡಳದ ಮೂಲಕ ನಿರಂತರವಾಗಿ ರೈತರ ತೊಗರಿ, ಕಡಲೆ, ಭತ್ತ, ರಾಗಿ, ಕೃಷಿ ಉತ್ಪನ್ನಗಳನ್ನು ಖರೀದಿಸಿ 2225 ಕೋಟಿ ರೂ.ಗಳನ್ನು ರೈತರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಗಿದೆ. ಹೈನುಗಾರಿಕೆ, ಮೀನುಗಾರಿಕೆ ಸಾಲಕ್ಕಾಗಿ 2020-21 ನೇ ಸಾಲಿನಲ್ಲಿ 38 ಸಾವಿರ ಜನರಿಗೆ 100 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಈವರೆಗೆ 34,927 ಜನರಿಗೆ 60.30 ಕೋಟಿ ರೂ. ವಿತರಿಸಲಾಗಿದೆ. ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ.ಗಳಂತೆ 1885.88 ಕೋಟಿ ರೂ. ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕೋವಿಡ್-19ರಿಂದ ಯಾವುದೇ ಕೃಷಿ ಚಟುವಟಿಕೆಗಳಿಗೆ ರೈತ ಬಾಂಧವರಿಗೆ ಅಡಚಣೆಯಾಗಬಾರದೆಂಬ ಮುಖ್ಯಮಂತ್ರಿಯ ಮಹದಾಸೆಯಂತೆ 39 ಸಾವಿರ ಕೋಟಿ ರೂ.ಗಳನ್ನು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಈ ಮೂಲಕ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಶಕ್ತಿಯನ್ನು ಸಹಕಾರ ಕ್ಷೇತ್ರದ ವಿವಿಧ ವಲಯಗಳಿಂದ ನೀಡಲಾಗುತ್ತಿದೆ.
ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ