ನೀರಾವರಿ ನಿಗಮ ಸ್ಥಳಾಂತರಿಸದಂತೆ ರೈತ ಮುಖಂಡರ ಆಗ್ರಹ: ನಿಗಮದ ಕಚೇರಿ ಎದುರು ಧರಣಿ
ಧಾರವಾಡ, ಸೆ.15: ಕರ್ನಾಟಕ ನೀರಾವರಿ ನಿಗಮ ನಿಯಮಿತ ಕೇಂದ್ರ ಕಚೇರಿಯನ್ನು ಸ್ಥಳಾಂತರ ಮಾಡದಂತೆ ರೈತ ಸೇನಾ ಮುಖಂಡರು ಮಂಗಳವಾರ ಧಾರವಾಡದ ನೀರಾವರಿ ನಿಗಮದ ಕಚೇರಿ ಎದುರು ಧರಣಿ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ, ಧಾರವಾಡದ ಶ್ರೀನಗರದಲ್ಲಿರುವ ನೀರಾವರಿ ಕಚೇರಿಯನ್ನು ಬೆಳಗಾವಿ ಸುವರ್ಣಸೌಧಕ್ಕೆ ವರ್ಗಾಯಿಸಿದ್ದಾರೆ. ಇದು ಈ ಭಾಗದ ಜನರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆ ಕಚೇರಿ ಸ್ಥಳಾಂತರಕ್ಕೆ ಸಂಬಂಧಪಟ್ಟಂತೆ ಕಳೆದ ಐದು ದಿನಗಳಿಂದ ಧರಣಿ ಮಾಡಲಾಗಿದ್ದು, ಈ ಬಗ್ಗೆ ಸ್ಥಳಾಂತರ ತಡೆ ಹಿಡಿಯುವಂತೆ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ಅರ್ಜಿ ಸಲ್ಲಿಸಲಾಗಿದೆ. ರಿಟ್ ಪಿಟಿಷನ್ ಆದೇಶ ಆಗುವರೆಗೂ ಸ್ಥಳಾಂತರ ಪ್ರಕ್ರಿಯೆ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
Next Story





