'ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಬಿಲ್' ಆರೋಪದ ತನಿಖೆಗೆ ಡಿಎಚ್ಒಗೆ ಸೂಚನೆ: ಡಿಸಿ ಡಾ.ಬಗಾದಿ ಗೌತಮ್
ಚಿಕ್ಕಮಗಳೂರು, ಸೆ.18: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯ ಸಂಬಂಧಿಯಿಂದ ಚಿಕಿತ್ಸೆಗೆ ಹೆಚ್ಚು ಬಿಲ್ ಪಡೆದಿರುವ ಬಗ್ಗೆ ಲಿಖಿತವಾಗಿ ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಡಿಎಚ್ಒ ಅವರಿಗೆ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ತಿಳಿಸಿದ್ದಾರೆ.
ಆ.24ರಂದು ಪ್ರಸನ್ನಕುಮಾರ್ ಎಂಬವರು ತನ್ನ ಮಾವನಿಗೆ ಕೊರೋನ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ನಗರದ ಆಶ್ರಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯವರು ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸೆ.16ರಂದು ಮೃತಪಟ್ಟಿದ್ದಾರೆ. ಚಿಕಿತ್ಸೆ ನೀಡಿದ್ದಕ್ಕೆ ಆಸ್ಪತ್ರೆಯವರು ದುಬಾರಿ ಬಿಲ್ ಪಡೆದಿದ್ದಾರೆಂದು ಮೃತರ ಸಂಬಂಧಿ ಪ್ರಸನ್ನಕುಮಾರ್ ಶುಕ್ರವಾರ ಬೆಳಗ್ಗೆ ದೂರು ನೀಡಿದ್ದಾರೆ.
ದೂರು ಪರಿಶೀಲಿಸಿದ ಸಂಬಂಧಿಸಿದ ಆರೋಗ್ಯ ಇಲಾಖೆಯ ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ.ಉಮೇಶ್ ಅವರಿಗೆ ತನಿಖೆಗೆ ಸೂಚನೆ ನೀಡಿದ್ದೇನೆ. ಅವರು ಪರಿಶೀಲಿಸಿದ ಬಳಿಕ ನೀಡುವ ವರದಿಯ ಆಧಾರದ ಮೇಲೆ ಆಸ್ಪತ್ರೆಯ ಮೇಲೆ ಕ್ರಮಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.