ಕೆಲಸವಿಲ್ಲದೆ ಸೌದಿಯಲ್ಲಿ ಭಿಕ್ಷೆ ಬೇಡುತ್ತಿದ್ದ 450 ಭಾರತೀಯರ ಬಂಧನ
ಹೈದರಾಬಾದ್: ಕೋವಿಡ್ ಸಾಂಕ್ರಾಮಿಕದಿಂದಾಗಿ ಸೌದಿ ಅರೇಬಿಯಾದಲ್ಲಿ ತಮ್ಮ ಉದ್ಯೋಗ ಕಳೆದುಕೊಂಡು ಭಿಕ್ಷೆ ಬೇಡುತ್ತಿದ್ದ 450 ಮಂದಿ ಭಾರತೀಯ ಕಾರ್ಮಿಕರನ್ನು ಅಧಿಕಾರಿಗಳು ಜೆದ್ದಾದ ಶುಮ್ಸೈ ದಿಗ್ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಅವರಲ್ಲಿ ಹೆಚ್ಚಿನವರ ವರ್ಕ್ ವೀಸಾ ಅವಧಿ ಮುಕ್ತಾಯಗೊಂಡಿದ್ದು, ಭಿಕ್ಷೆ ಬೇಡದೆ ಅವರಿಗೆ ಅನ್ಯ ದಾರಿಯಿರಲಿಲ್ಲ ಎನ್ನಲಾಗಿದೆ.
ಅವರೆಲ್ಲ ಭಿಕ್ಷೆ ಬೇಡಿ ನಂತರ ತಮ್ಮ ಬಾಡಿಗೆ ಕೊಠಡಿಗಳಿಗೆ ಮರಳುತ್ತಿದ್ದಂತೆಯೇ ಸೌದಿಯ ಅಧಿಕಾರಿಗಳು ಅವರನ್ನು ಪತ್ತೆ ಹಚ್ಚಿ ದಿಗ್ಬಂಧನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಹೀಗೆ ದಿಗ್ಬಂಧನ ಕೇಂದ್ರಗಳಲ್ಲಿರುವ ಮಂದಿಯ ಪೈಕಿ 38 ಮಂದಿ ಉತ್ತರ ಪ್ರದೇಶದವರಾಗಿದ್ದರೆ, 10 ಮಂದಿ ಬಿಹಾರ, ಐದು ಮಂದಿ ತೆಲಂಗಾಣ, ತಲಾ ನಾಲ್ಕು ಮಂದಿ ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಮತ್ತು ಕರ್ನಾಟಕ ಹಾಗೂ ಒಬ್ಬರು ಆಂಧ್ರ ಪ್ರದೇಶದವರಾಗಿದ್ದಾರೆ.
“ನಾವೇನೂ ತಪ್ಪು ಮಾಡಿಲ್ಲ, ಮಾಡಲು ಕೆಲಸವಿಲ್ಲದೆ, ಕೈಯ್ಯಲ್ಲಿ ಹಣವಿಲ್ಲದೆ ಅಸಹಾಯಕರಾಗಿ ಭಿಕ್ಷೆ ಬೇಡಿದ್ದೇವೆ” ಎಂದು ಈ ಮಂದಿ ಅಲವತ್ತುಕೊಳ್ಳುತ್ತಿದ್ಧಾರೆ.
ಕಷ್ಟದಲ್ಲಿರುವ ಈ ಭಾರತೀಯರನ್ನು ತವರು ದೇಶಕ್ಕೆ ಕಳುಹಿಸಲು ಸಹಾಯ ಮಾಡಲಾಗುತ್ತಿದೆಯೇ ಎಂಬ ಕುರಿತಂತೆ ಜೆದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅವರ ಕಚೇರಿ ಪ್ರತಿಕ್ರಿಯಿಸಿಲ್ಲ.