ದಲಿತರು ಬ್ರಾಹ್ಮಣ್ಯ ತೊರೆದು ಹೊರಬನ್ನಿ: ನಾರಾಯಣ ಮಣೂರು
ಕಾಪು, ಸೆ.21: ದಲಿತರು ತಮ್ಮಳಗಿನ ಬ್ರಾಹಣ್ಯವನ್ನು ಕಿತ್ತೊಗೆಯಬೇಕು. ಪುರೋಹಿತಶಾಹಿ ದೇವರುಗಳನ್ನು ಪೂಜಿಸುವ ಮೌಢ್ಯತೆಯನ್ನು ಧಿಕ್ಕರಿಸಿ ಹೊರ ಬರಬೇಕು ಎಂದು ಚಿಂತಕ ನಾರಾಯಣ ಮಣೂರು ಹೇಳಿದ್ದಾರೆ.
ಕಾಪು ಉಳಿಯಾರಗೋಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ರವಿವಾರ ಜರಗಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾಪು ತಾಲೂಕು ಶಾಖೆಯ ಪದಾಧಿಕಾರಿಗಳ ಪುನರ್ ರಚನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡುತಿದ್ದರು.
ಅಂಬೇಡ್ಕರ್ ಹೇಳಿದ ಬುದ್ಧ ಮಾರ್ಗವೊಂದೇ ನಮಗೆ ದಾರಿದೀಪ. ನಾವೆಲ್ಲರೂ ಅಸ್ಪೃಶ್ಯತೆ, ಅಸಮಾನತೆ, ಮೌಡ್ಯತೆ, ಅಸಮಾನತೆಯೇ ಮೈದುಂಬಿ ಕೊಂಡಿರುವ ಹಿಂದೂ ಧರ್ಮವನ್ನು ಅಂಬೇಡ್ಕರ್ರಂತೆ ತೊರೆದು ಬೌದ್ಧ ಧಮ್ಮವನ್ನು ಅಪ್ಪಿಕೊಳ್ಳಬೇಕಾಗಿದೆ. ಹಾಗಾದರೆ ಮಾತ್ರ ನಾವು ಇಷ್ಟು ವರ್ಷ ಗಳಿಂದ ಚಳುವಳಿ ಮಾಡಿಕೊಂಡು ಬಂದಿರುವುದಕ್ಕೆ ಒಂದು ಸಾರ್ಥಕ್ಯವಿರುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಅಂಬೇಡ್ಕರ್ ಸಂಘಟನೆ ಗಳು ಸಾಕಷ್ಟಿದ್ದರೂ ರಾಜ್ಯಮಟ್ಟದಲ್ಲಿ ಮಾವಳ್ಳಿ ಶಂಕರ್ ನೇತೃತ್ವದ ಅಂಬೇಡ್ಕರ್ ವಾದ ಸಂಘಟನೆಯು ಒಂದು ಬಲಿಷ್ಠ ಮತ್ತು ಪ್ರಾಮಾಣಿಕವಾ ದುದು. ಅಂಬೇಡ್ಕರ್ ಆಶಯದಂತೆ ಕಾರ್ಯಾಚರಿಸುತ್ತಿರುವ ಏಕೈಕ ದಲಿತ ಸಂಘರ್ಷ ಸಮಿತಿ ನಮ್ಮ ದಾಗಿದೆ. ಆದುದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಜಿಲ್ಲೆಯಲ್ಲಿ ಒಂದು ಬಲಿಷ್ಠ ಸಂಘಟನೆ ಕಟ್ಟಿ ದಲಿತರ ನೋವಿಗೆ, ಕಷ್ಟಕ್ಕೆ, ಸ್ಪಂದಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಮುಂಬರುವ ದಿನಗಳು ಕರಾಳವಾಗಿವೆ. ಈ ಸರಕಾರ ರೈಲ್ವೆ, ಬಿಎಸ್ಎನ್ಎಲ್, ಎಲ್ಐಸಿ, ವಿಮಾನ ನಿಲ್ದಾಣ ಹೀಗೆ ಎಲ್ಲವನ್ನೂ ಖಾಸಗಿಯವರಿಗೆ ಕೊಟ್ಟು ಮೀಸಲಾತಿ ದಲಿತರಿಗೆ ಸಿಗದಂತೆ ಮಾಡುತ್ತಿದೆ. ಸಂವಿಧಾನವನ್ನು ಬದಲಾಯಿ ಸುವ ಕೆಲಸವನ್ನು ಹಿಂಬಾಗಿನಿಂದ ಮಾಡುತ್ತಿದ್ದಾರೆ. ಒಂದು ವೇಳೆ ಸಂವಿಧಾನ ಬದಲಾಯಿಸಿದರೆ ದಲಿತರೆಲ್ಲ ಅನಾಥರಾಗಿ ಬೀದಿಗೆ ಬೀಳುವುದು ಖಚಿತ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸಂಘಟನೆ ಬಲಪಡಿಸಿ ಹೋರಾಟ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಶ್ಯಾಮಸುಂದರ್ ತೆಕ್ಕಟ್ಟೆ, ಪರಮೇಶ್ವರ್ ಉಪ್ಪೂರು, ಭಾಸ್ಕರ್ ಮಾಸ್ಟರ್, ಗೋಪಾಲಕೃಷ್ಣ ಕುಂದಾಪುರ, ರಾಜೇಂದ್ರ ನಾಥ್, ಎಸ್.ಎಸ್.ಪ್ರಸಾದ್, ವಸಂತಿ ಕಲ್ಲಟ್ಟೆ, ಸೌಮ್ಯ ಕಾಪು, ಶಂಕರ್ದಾಸ್ ಚೇಂಡ್ಕಳ, ರಾಘವ ಬೆಳ್ಳೆ, ದಿನಕರ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು. ಸುಕೇಶ ಪಡುಬಿದ್ರೆ ಸ್ವಾಗತಿದರು. ಕೀರ್ತಿ ಪಡುಬಿದ್ರಿ ಕಾರ್ಯ ಕ್ರಮ ನಿರೂಪಿಸಿದರು.