ಬಹುಮಹಡಿ ಕಟ್ಟಡದ ತಡೆಗೋಡೆ ಕುಸಿತ: ಉಡುಪಿ ಡಿಸಿಯಿಂದ ಪರಿಶೀಲನೆ
ಉಡುಪಿ, ಸೆ. 22: ಮಣಿಪಾಲ ಕುಂಡೇಲುಕಾಡು ಗುಡ್ಡೆಯ ಮೇಲಿರುವ ಬಹುಮಹಡಿ ಕಟ್ಟಡದ ಅಡಿಭಾಗದ ತಡೆಗೋಡೆ ಕುಸಿದ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ಜಿ.ಜಗದೀಶ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಟ್ಟಡಕ್ಕೆ ಕಾಮಗಾರಿಗೆ ಸಂಬಂಧಿಸಿ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳೊಂದಿಗೆ ಮಾತುಕತೆ ನಡೆಸಿದರು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಎಂಟು ಮಹಡಿಯ ಈ ಪ್ರಿಮಿಯರ್ ಎನ್ಕ್ಲೈವ್ ವಸತಿ ಸಮುಚ್ಛಯದ 35 ಫ್ಲಾಟ್ಗಳಲ್ಲಿ ವಾಸವಾಗಿದ್ದ ನಿವಾಸಿಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸ ಲಾಗಿದೆ. ತಡೆಗೋಡೆಯನ್ನು ಕೂಡಲೇ ನಿರ್ಮಿಸಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಕೇವಲ ತಡೆಗೋಡೆ ಕುಸಿದಿ ರುವುದರಿಂದ ಸದ್ಯ ಕಟ್ಟಡಕ್ಕೆ ಯಾವುದೇ ಅಪಾಯ ಇಲ್ಲ ಎಂದು ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ತಿಳಿಸಿದ್ದಾರೆ.
ಗುಡ್ಡೆಯ ಜರಿದ ಹಿನ್ನೆಲೆಯಲ್ಲಿ ನಿನ್ನೆ ಅಪರಾಹ್ನದಿಂದ ನಿರ್ಬಂಧಿಸಲಾಗಿದ್ದ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯ ಸಂಚಾರಕ್ಕೆ ಇಂದು ಸಂಜೆಯ ಬಳಿಕ ಅವಕಾಶ ನೀಡಲಾಯಿತು.