ಕೊರೋನ ಹರಡಲು ತಬ್ಲಿಗಿಗಳು ಕಾರಣ ಎಂದ ಬಿಜೆಪಿ ಸದಸ್ಯ: ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ
ವಿಧಾನ ಪರಿಷತ್ ಅಧಿವೇಶನ
ಬೆಂಗಳೂರು, ಸೆ.22: ಕೊರೋನ ವೈರಸ್ ಸೋಂಕು ತಡೆಗಟ್ಟಲು ರಾಜ್ಯ ಸರಕಾರ ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಆದರೆ, ತಬ್ಲಿಗಿ ನಡೆಸಿದ ಸಭೆಯಿಂದಾಗಿ ಕೊರೋನ ಹೆಚ್ಚಾಗಲು ಕಾರಣವಾಯಿತು ಎಂದು ಬಿಜೆಪಿ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಆರೋಪಿಸುತ್ತಿದ್ದಂತೆಯೇ ವಿರೋಧ ಪಕ್ಷದ ಸದಸ್ಯರು ಆಡಳಿತರೂಢ ಪಕ್ಷದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ರಾಜಕಾರಣ ಮಾಡುವ ಕೆಲಸಕ್ಕೆ ಮುಂದಾಗಬೇಡಿ ಎಂದು ಕಿಡಿಕಾರಿದರು.
ವಿಧಾನ ಪರಿಷತ್ನ ಅಧಿವೇಶನದಲ್ಲಿ ಅರ್ಧ ಗಂಟೆ ಕಾಲಾವಧಿ ಚರ್ಚೆ ಅಡಿಯಲ್ಲಿ ನಡೆದ ಕೊರೋನ ಸಂಬಂಧವಾಗಿ ಖರೀದಿಸಲಾದ ವಿವಿಧ ಸಾಮಗ್ರಿಗಳ ಕುರಿತು ಎಂ.ಕೆ.ಪ್ರಾಣೇಶ್ ಅವರು ಮಾತನಾಡಿದರು.
ಕೊರೋನ ಸೋಂಕು ತಡೆಗೆ ಇನ್ನೂ ಯಾವುದೇ ಔಷಧಿಯನ್ನು ಕಂಡು ಹಿಡಿದಿಲ್ಲ. ಸರಕಾರ ಕೊರೋನ ತಡೆಗೆ ಎಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ತಬ್ಲಿಗಿಗಳು ರಾಜ್ಯಕ್ಕೆ ಬಂದಿದ್ದರಿಂದ ಕೊರೋನ ಹೆಚ್ಚಾಯಿತು ಎಂದು ಆರೋಪಿಸಿದರು.
ಈ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಎಂ.ನಾರಾಯಣಸ್ವಾಮಿ ಅವರು ಬಿಜೆಪಿ ಸರಕಾರ ಕೊರೋನ ವೇಳೆಯಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು, ಕೊರೋನವನ್ನು ನಿಯಂತ್ರಣಕ್ಕೆ ತರುವ ಕೆಲಸ ಮಾಡಿ ಎಂದು ಹೇಳಿದರು.