ಮಂಗಳೂರಿನ ಬಗ್ಗೆ ಅಭಿಮಾನ ಹೊಂದಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ
2003ರ ಕರಾವಳಿ ಉತ್ಸವದಲ್ಲಿ ಭಾಗವಹಿಸಿದ್ದ ಖ್ಯಾತ ಗಾಯಕ
ಮಂಗಳೂರು, ಸೆ.25: ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿ ಅವರ ಅಭಿಮಾನಿಗಳನ್ನು ಕಂಡು ಮಂಗಳೂರು ಹಾಗೂ ಇಲ್ಲಿನ ಜನರ ಬಗ್ಗೆ ತಾನು ಅಭಿಮಾನ ಹೊಂದಿದ್ದೇನೆ ಎಂದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇದಿಕೆಯಲ್ಲಿ ಹೇಳಿರುವುದನ್ನು ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.
2003ರಲ್ಲಿ ಕರಾವಳಿ ಉತ್ಸವದ ಅಂಗವಾಗಿ ಅಂದು ಹಮ್ಮಿಕೊಂಡಿದ್ದ ಬೀಚ್ ಉತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕರಾವಳಿಯಲ್ಲಿ ತಮಗಿರುವ ಅಭಿಮಾನಿ ಗಳನ್ನು ಕಂಡು ಎಂದಿನಂತೆ ನಮ್ರತೆಯಿಂದ ಅಭಿಮಾನಿಗಳಿಗೆ ಎಸ್.ಪಿ.ಬಿ ಕೃತಜ್ಞತೆ ಸಲ್ಲಿಸುವುದನ್ನು ಮರೆಯಲಿಲ್ಲ.
ಆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಅರವಿಂದ ಶ್ರೀ ವಾತ್ಸವ ಹಾಗೂ ಕರಾವಳಿ ಉತ್ಸವ ಸಮಿತಿಯ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ನಿವಾಸದ ಬಳಿ ಚಹಾ ಕೂಟದಲ್ಲಿ ಎಲ್ಲರೊಂದಿಗೆ ಭಾಗವಹಿಸಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕರಾವಳಿ ಉತ್ಸವ ದ ಆಯೋಜನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಸಂಘಟಕರಿಗೆ ಅತ್ಯಂತ ವಿನಯ ಪೂರ್ವಕ ಮಾತುಗಳ ಮೂಲಕ ಕೆಲವು ಸಲಹೆಗಳನ್ನು ನೀಡಿರುವುದನ್ನು ಕರಾವಳಿ ಉತ್ಸವದ ಸಂಘಟಕರು ನೆನಪಿಸಿಕೊಳ್ಳುತ್ತಾರೆ.