ಸೆ.28ರಂದು ಕೊಡಗು ಬಂದ್ ಗೆ ಸಹಕರಿಸಲು ಜಿಲ್ಲಾ ಕಾಂಗ್ರೆಸ್ ಮನವಿ, ಜೆಡಿಎಸ್ ಬೆಂಬಲ
ಮಡಿಕೇರಿ, ಸೆ.26: ಕೃಷಿ ಕ್ಷೇತ್ರ ಮತ್ತು ಕಾರ್ಮಿಕ ವಲಯಕ್ಕೆ ಮಾರಕವಾಗಿರುವ ಮಸೂದೆಗಳ ವಿರುದ್ಧ ಸೆ.28 ರಂದು ಕೊಡಗು ಬಂದ್ ಮೂಲಕ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲೆಯ ಜನ ಸಹಕಾರ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರೈತ, ಕಾರ್ಮಿಕ ಮತ್ತು ದಲಿತ ಐಕ್ಯತಾ ಸಮಿತಿ ರಾಜ್ಯ ವ್ಯಾಪಿ ನಡೆಸಲು ಉದ್ದೇಶಿಸಿರುವ ಬಂದ್ ಹಾಗೂ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಕುಶಾಲನಗರ ಕೊಪ್ಪ, ಸಂಪಾಜೆ, ಕರಿಕೆ ಮತ್ತು ಕುಟ್ಟ ಗಡಿಭಾಗಗಳನ್ನು ಬಂದ್ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಹೋರಾಟಗಾರರೊಂದಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ನಿಯಮ, ಕಾರ್ಮಿಕ ಮಸೂದೆ, ಕೈಗಾರಿಕೆ, ವಿದ್ಯುತ್, ಮೋಟಾರು ಮತ್ತಿತರ ಕಾಯ್ದೆಗಳ ವಿರುದ್ಧ ಮತ್ತು ಕೋವಿಡ್ ನಿರ್ವಹಣೆಯ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಎಲ್ಲಾ ಕ್ಷೇತ್ರಗಳ ಜನರ ಸಹಕಾರದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ರೈತರ ಹೋರಾಟಕ್ಕೆ ಕೊಡಗು ಜೆಡಿಎಸ್ ಬೆಂಬಲ
ರೈತ ಪರ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸೆ.28 ರಂದು ನಡೆಸುತ್ತಿರುವ ಪ್ರತಿಭಟನೆಗೆ ಜಿಲ್ಲಾ ಜಾತ್ಯತೀತ ಜನತಾದಳ ಸಂಪೂರ್ಣ ಬೆಂಬಲ ಸೂಚಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಮಸೂದೆಗಳು ರೈತ ವಿರೋಧಿಯಾಗಿದೆ ಎಂದು ಆರೋಪಿಸಿದ್ದಾರೆ. ಕೃಷಿಕ ವರ್ಗ ಹಾಗೂ ಕಾರ್ಮಿಕರು ನಡೆಸುವ ಎಲ್ಲಾ ಹೋರಾಟಗಳಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.