ತಂಗಿಯ ಶವವನ್ನು ಮನೆಯೊಳಗೆ ತರಲು ಅವಕಾಶ ನೀಡಲಿಲ್ಲ: ಸಂತ್ರಸ್ತೆಯ ಸಹೋದರನ ಅಳಲು
ಲಕ್ನೊ,ಸೆ.29: ಉತ್ತರಪ್ರದೇಶದ ಹತ್ರಾಸ್ನಲ್ಲಿ ನಾಲ್ವರು ಮೇಲ್ಜಾತಿಯ ಪುರುಷರಿಂದ ಅತ್ಯಾಚಾರಕ್ಕೊಳಗಾದ 19ರ ಹರೆಯದ ದಲಿತ ಮಹಿಳೆಯ ಶವವನ್ನು ಬುಧವಾರ ಮುಂಜಾನೆ 3 ಗಂಟೆಯ ನಂತರ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದಾರೆ. ಯುವತಿಯ ಕುಟುಂಬದವರಿಗೆ ಕೊನೆಯ ಬಾರಿಗೆ ಮೃತದೇಹವನ್ನು ಮನೆಗೆ ತರಲು ಅವಕಾಶ ನಿರಾಕರಿಸಲಾಗಿದೆ.
"ನನ್ನ ತಂಗಿಯ ಅಂತಿಮ ಕ್ರಿಯೆ ಮಾಡಲಾಗಿದೆ ಎಂದು ಕಾಣುತ್ತದೆ. ಪೊಲೀಸರು ನಮ್ಮಲ್ಲಿ ಏನನ್ನೂ ಹೇಳುತ್ತಿಲ್ಲ. ಕೊನೆಯ ಬಾರಿ ತಂಗಿಯ ಶವವನ್ನು ಮನೆಯೊಳಗೆ ತರಲು ನಮಗೆ ಅವಕಾಶ ಮಾಡಿಕೊಡಬೇಕೆಂದು ನಾವು ಅವರನ್ನು ಬೇಡಿಕೊಂಡೆವು. ಆದರೆ ಅವರು ನಮ್ಮ ಮಾತನ್ನು ಕೇಳಲಿಲ್ಲ'' ಎಂದು ಮಹಿಳೆಯ ಸಹೋದರ 'ದಿ ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದ್ದಾರೆ.
"ನಾವು ಆಕೆಯ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದಾಗ ಪೊಲೀಸರು ಆಕ್ರಮಣಕಾರಿಯಾಗಿ ವರ್ತಿಸಿದರು. ನನ್ನ ಸಂಬಂಧಿಕರು ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ನೋಡಲು ಯತ್ನಿಸಿದಾಗ,ಅವರು ನಮ್ಮನ್ನು ಒದೆಯಲು ಆರಂಭಿಸಿದರು. ನಮ್ಮ ಸಂಬಂಧಿಕರ ಬಳೆಗಳನ್ನು ಮುರಿದರು. ಭಯದಿಂದ ನಾವು ಮನೆಯ ಬಾಗಿಲು ಹಾಕಿಕೊಂಡೆವು. ಅವರು ಏಕೆ ಹೀಗೆ ಮಾಡಿದು ಎಂದು ಗೊತ್ತಿಲ್ಲ'' ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾರೆ.