ಹಿಂದುಳಿದ ಜಾತಿಗಳ ಒಕ್ಕೂಟದ ಹೋರಾಟಕ್ಕೆ ಬೆಂಬಲ: ಮಾಜಿ ಸಿಎಂ ಸಿದ್ದರಾಮಯ್ಯ
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕಾರಕ್ಕೆ ಆಗ್ರಹ

ಬೆಂಗಳೂರು, ಅ.3: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರಕಾರ ಕೂಡಲೇ ಸ್ವೀಕಾರ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶನಿವಾರ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರದಿ ಸ್ವೀಕಾರ ಮಾಡಲು ಸರಕಾರ ಹಿಂದೇಟು ಹಾಕಿದರೆ ಒಕ್ಕೂಟ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಈ ಹೋರಾಟಕ್ಕೆ ನನ್ನ ಬೆಂಬಲವೂ ಇರಲಿದೆ ಎಂದು ಘೋಷಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ವರದಿ ಸಿದ್ಧವಾಗಿರಲಿಲ್ಲ. ಹೀಗಾಗಿ ಸ್ವೀಕಾರ ಮಾಡುವ ಪ್ರಶ್ನೆಯೇ ಇರಲಿಲ್ಲ. ಈ ಕುರಿತು ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಆರ್ಥಿಕ ಮತ್ತು ಸಾಮಾಜಿಕ ಜನ ಗಣತಿ ಕೊನೆಯ ಬಾರಿಗೆ ಆಗಿದ್ದು 1931ರಲ್ಲಿ. ಬಳಿಕ ವಿಶ್ವ ಯುದ್ಧ ಆಗಿದ್ದರಿಂದ ಜನ ಗಣತಿ ನಡೆಯಲಿಲ್ಲ. ಹೀಗಾಗಿ ಆರ್ಥಿಕ ಮತ್ತು ಸಾಮಾಜಿಕ ಆಧಾರದ ಮೇಲೆಯೂ ಗಣತಿ ನಡೆಯಲಿಲ್ಲ ಎಂದರು.
ಮೀಸಲು ವಿಚಾರದಲ್ಲಿ ವಿಚಾರಣೆಗಳು ನಡೆದಾಗ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳು ಜಾತಿ ಮತ್ತು ಜನಗಣತಿ ಬಗ್ಗೆ ವರದಿ ಹಾಗೂ ದಾಖಲೆಗಳನ್ನು ಕೇಳುತ್ತಿದ್ದವು. ನ್ಯಾಯಮೂರ್ತಿಗಳೂ ಈ ಬಗ್ಗೆ ಮಾಹಿತಿ ಬಯಸುತ್ತಿದ್ದರು. ಆದರೆ, ಸಮಗ್ರವಾದ ವರದಿಗಳೇ ನ್ಯಾಯಾಲಯಗಳಿಗೆ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ನಾನು ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಆಧಾರದ ಮೇಲೆ ಸಮೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನಮ್ಮ ಸರಕಾರ ಗಣತಿ ನಡೆಸುವ ಜವಾಬ್ದಾರಿ ವಹಿಸಿತು. ಆಗ ಹಿರಿಯ ನ್ಯಾಯವಾದಿ ಕಾಂತರಾಜ್ ಆಯೋಗದ ಅಧ್ಯಕ್ಷರಾಗಿದ್ದು, ಆಯೋಗ ಸುಮಾರು 1.88 ಲಕ್ಷ ಸಿಬ್ಬಂದಿಯನ್ನು ಗಣತಿಗೆ ಬಳಸಿಕೊಂಡಿತ್ತು. ಸಿಬ್ಬಂದಿ ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗೆ ಭೇಟಿ ನೀಡಿ, 55 ಅಂಶಗಳನ್ನು ಮುಂದಿಟ್ಟುಕೊಂಡು ಮಾಹಿತಿ ಸಂಗ್ರಹಿಸಿದ್ದರು. ಇದರ ಆಧಾರದ ಮೇಲೆ ಆಯೋಗ ಸಮಗ್ರವಾದ ವರದಿಯನ್ನು ಸಿದ್ಧಪಡಿಸಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಎಲ್ಲಿಯೂ ಈ ರೀತಿಯ ವರದಿಯನ್ನು ಸಿದ್ಧಪಡಿಸಿಲ್ಲ. ಇದಕ್ಕಾಗಿ 162.77 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು. ಕೇವಲ ಜಾತಿ ಗಣತಿ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಅಂಕಿ-ಅಂಶ ಇದ್ದರೆ, ಮಾಹಿತಿ ಇದ್ದರೆ ಸಾಮಾಜಿಕ, ಆರ್ಥಿಕವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರಲು, ಮೀಸಲು ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಮೀಸಲು ಪ್ರಮಾಣ ಯಾವ ಸಮುದಾಯಕ್ಕೆ ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಈ ಹಿಂದೆ ಅವರ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರಲಿಲ್ಲ. ಹೀಗಾಗಿ ನಮ್ಮ ಸರಕಾರದ ಅವಧಿಯಲ್ಲಿ ಎಸ್ಸಿಇಪಿ/ಟಿಎಸ್ಪಿ ಯೋಜನೆ ಜಾರಿಗೆ ತರಲಾಯಿತು. ಬೆಳಗಾವಿ ಅಧಿವೇಶನದಲ್ಲಿ ಈ ಸಂಬಂಧ ಕಾಯಿದೆಯನ್ನೂ ರೂಪಿಸಲಾಯಿತು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ. 17.15, ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ. 6.95 ಇದೆ. ಒಟ್ಟು ಶೇ. 24.1ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿದ್ದಾರೆ. ಎಲ್ಲ ಜಾತಿಗಳ ಬಗ್ಗೆ ಮಾಹಿತಿ ಇದ್ದರೆ ಈ ರೀತಿಯ ಕಾರ್ಯಕ್ರಮ ಜಾರಿಗೆ ತರಲು ಅನುಕೂಲವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಡವರಿಗೆ, ದಲಿತರಿಗೆ, ಶೋಷಿತರಿಗೆ, ಅವಕಾಶ ವಂಚಿತರಿಗೆ ಕೇವಲ ಮತದಾನದ ಹಕ್ಕು ನೀಡಿದರೆ ಸಾಲದು. ಅವರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಶಕ್ತಿ ಬರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಅಧಿಕಾರದಲ್ಲಿ, ಸಂಪತ್ತಿನಲ್ಲಿ ಪಾಲು ಇರಬೇಕು. ಶಿಕ್ಷಣ ಎಲ್ಲರಂತೆ ಅವರಿಗೂ ಸಿಗಬೇಕು. ಇದು ಆದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೆ ಸಾರ್ಥಕ ಆಗುತ್ತದೆ ಎಂಬುದು ಅಂಬೇಡ್ಕರ್ ನಿಲುವು ಆಗಿತ್ತು. ಈಗ ರಾಜಕೀಯ ಅಧಿಕಾರ ಸಿಕ್ಕಿದೆ. ಆದರೆ ಸಾಮಾಜಿಕ, ಆರ್ಥಿಕ ಶಕ್ತಿ ಸಿಕ್ಕಿಲ್ಲ ಎಂಬ ನೋವು ಇದೆ ಎಂದು ಅವರು ತಿಳಿಸಿದರು.
ನ್ಯಾಯಾಲಯಗಳು ಮತ್ತು ಸರಕಾರಗಳಿಗೆ ಸುಲಭವಾಗಿ ಮಾಹಿತಿ ಸಿಗುತ್ತದೆ. ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲ ಆಗುತ್ತದೆ. ಜೊತೆಗೆ ಅವಕಾಶ ವಂಚಿತರನ್ನು ಮೇಲೆ ಎತ್ತಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಈ ಗಣತಿ ಆರಂಭಿಸಿದ್ದು. ನಾನು ಮುಖ್ಯಮಂತ್ರಿ ಆಗಿರುವವರೆಗೆ ಆಯೋಗ ವರದಿ ಕೋಡಲಿಲ್ಲ. ಸಿದ್ದರಾಮಯ್ಯ ಇದ್ದಾಗಲೇ ತೆಗೆದುಕೊಳ್ಳಬಹುದಿತ್ತು ಎಂದು ಕೆಲವರು ಹೇಳುತ್ತಾರೆ ಎಂದು ಅವರು ತಿಳಿಸಿದರು.
ನಾನು ಆಯೋಗದಿಂದ ವರದಿಯನ್ನು ಕಿತ್ತುಕೊಳ್ಳಲು ಆಗುವುದೇ ? ನಾನಿದ್ದಾಗ ಆಯೋಗ ಕೊಡಲಿಲ್ಲ. ವರದಿ ಆಗ ಪೂರ್ಣವೂ ಆಗಿರಲಿಲ್ಲ. ಆ ವೇಳೆಗೆ ಚುನಾವಣೆ ಬಂದು ಬಳಿಕ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂತು. ಆಗ ಆಯೋಗ ವರದಿ ಕೊಡಲು ಪ್ರಯತ್ನ ಮಾಡಿತಾದರೂ ಸ್ವೀಕಾರ ಮಾಡಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ವರದಿ ಸ್ವೀಕಾರ ಮಾಡುವುದಿರಲಿ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನೆ ವಜಾ ಮಾಡಿದರು. ಹೀಗಾಗಿ ಕಾಂತರಾಜ್ ಆಯೋಗದ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಿದರು ಎಂದು ಸಿದ್ದರಾಮಯ್ಯ ಹೇಳಿದರು.
ಈವರೆಗೆ ಪ್ರಯತ್ನ ಮಾಡಿದರೂ ಸರಕಾರ ವರದಿಯನ್ನು ಸ್ವೀಕಾರ ಮಾಡುತ್ತಿಲ್ಲ. ಯಾವುದೋ ಜಾತಿಯನ್ನು ಗುರಿಯಾಗಿಟ್ಟುಕೊಂಡು ವರದಿ ಸಿದ್ಧಪಡಿಸಿಲ್ಲ. ರಾಜ್ಯದ ಜನಸಂಖ್ಯೆ ಈಗ 6.70 ಕೋಟಿ ಆಗಿರಬಹುದು. ಆಯೋಗ ನೇಮಕ ಮಾಡಿದ ಸಿಬ್ಬಂದಿ ಎರಡು, ಮೂರು ಬಾರಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.100ಕ್ಕೆ 100ರಷ್ಟು ಸಮೀಕ್ಷೆಯಾಗಿದೆ. ಕೇಂದ್ರ ಸರಕಾರವೇ ಜಾತಿ ಗಣತಿ ಮಾಡಬೇಕಿತ್ತು ಎಂದು ಅವರು ತಿಳಿಸಿದರು.
ವರದಿ ಕುರಿತು ನಾನು ಮೌನ ವಹಿಸಿಲ್ಲ. ಈ ಸರಕಾರ ವರದಿ ಸ್ವೀಕಾರ ಮಾಡಬಹುದು ಎಂದು ಕಾಯುತ್ತಿದ್ದೆ. ಆದರೆ, ಸರಕಾರ ತಯಾರಿಲ್ಲ. ರಾಜ್ಯದಲ್ಲಿರುವ ಎಲ್ಲ ಜಾತಿಗಳ ಬಗ್ಗೆಯೂ ಸಮೀಕ್ಷೆ ನಡೆದಿದೆ. ಇಂಥ ವರದಿಯನ್ನು ಸ್ವೀಕಾರ ಮಾಡಿ, ಅದರ ಆಧಾರದ ಮೇಲೆ ಮೀಸಲು ಸೌಲಭ್ಯ ಒದಗಿಸುವ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬಹುದು. ಎಷ್ಟೋ ಕುಟುಂಬಗಳಿಗೆ ಇನ್ನೂ ಸರಕಾರದ ಸವಲತ್ತು ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಎಸ್ಟಿ ಮೀಸಲು ಹೆಚ್ಚಳಕ್ಕೆ ವಿರೋಧವಿಲ್ಲ: ಪರಿಶಿಷ್ಟ ಪಂಗಡದ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ನೀಡಿದ್ದಾರೆ. ಎಸ್ಟಿ ಸಮುದಾಯವರು ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ. ನಾಗಮೋಹನ ದಾಸ್ ವರದಿಯನ್ನು ಸರಕಾರ ಸ್ವೀಕಾರ ಮಾಡಿದೆ ಎಂದು ಅವರು ತಿಳಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ಒದಗಿಸಬೇಕು ಎಂದು ಸಂವಿಧಾನವೆ ಹೇಳಿದೆ. ನಾವು ಸಾಮಾಜಿಕ ನ್ಯಾಯದ ಪರ ಎಂದು ಆಡಳಿತ ನಡೆಸುವವರು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಮಂಡಲ್ ಆಯೋಗದ ವರದಿಯನ್ನು ವಿರೋಧ ಮಾಡಿದವರೇ ಈಗ ಅಧಿಕಾರದಲ್ಲಿ ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಒಕ್ಕೂಟದ ಗೌರವ ಅಧ್ಯಕ್ಷ ಡಾ. ಬಿ.ಕೆ.ರವಿ, ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಸುರೇಶ್ ಲಾತೂರ್, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು.







