ಅಟಲ್ ಸುರಂಗ ಲೋಕಾರ್ಪಣೆ ದೇಶದ ಭದ್ರತೆಗೆ ಲಾಭದಾಯಕ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಅ. 3: ವಿಶ್ವದ ಅತಿ ಉದ್ದದ ಹಾಗೂ ಅತೀ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿರುವುದು ಭಾರತದ ಘನತೆ, ಕೀರ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಬಣ್ಣಿಸಿದ್ದಾರೆ.
ಲಡಾಖ್ನಲ್ಲಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಮಯದಲ್ಲಿ ಈ ಸುರಂಗ ಮಾರ್ಗ ಭಾರತೀಯ ಸೇನೆಗೆ ಅಪಾರ ಸಹಾಯ ಮಾಡಲಿದೆ. ಮನಾಲಿಯನ್ನು ಲೇಹ್ಗೆ ಸಂಪರ್ಕಿಸುವ 9.02ಕಿ.ಮೀ ಉದ್ದದ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ.
ಈ ಮಾರ್ಗ ಮನಾಲಿ-ಲೇಹ್ ನಡುವಿನ ದೂರವನ್ನು 46 ಕಿ.ಮೀನಷ್ಟು ಕಡಿತಗೊಳಿಸುವ ಜತೆಗೆ, ನಾಲ್ಕರಿಂದ ಐದು ಗಂಟೆಗಳವರೆಗೆ ಪ್ರಯಾಣದ ಅವಧಿಯನ್ನು ಕಡಿತಗೊಳಿಸಲಿದೆ. ಭಾರತೀಯ ಸೇನೆಗೆ ವ್ಯೂಹಾತ್ಮಕವಾಗಿಯು ಅತ್ಯಂತ ಉಪಯುಕ್ತವಾಗಿರುವ ಹೆದ್ದಾರಿ ಇದಾಗಿದೆ. ವರ್ಷಪೂರ್ತಿ ಸಂಚಾರಕ್ಕೆ ಲಭ್ಯವಾಗಲಿರುವ ಸುರಂಗ ಮಾರ್ಗ ಸೇನೆಯ ಬಲ ಮತ್ತು ಶಕ್ತಿಯನ್ನು ಹೆಚ್ಚಿಸಲಿದ್ದು, ತನ್ಮೂಲಕ ದೇಶದ ಭದ್ರತೆಗೂ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







