ಉಡುಪಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಚರ್ಚ್ ಸ್ವಚ್ಛತೆ

ಉಡುಪಿ, ಅ. 3: ಪ್ರಧಾನಿ ನರೇಂದ್ರ ಮೋದಿ ಅವರ’ಸೇವಾ ಹೀ ಸಂಘಟನ್’ ತತ್ವದಡಿ 151ನೇ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಚರ್ಚ್, ದೇವಸ್ಥಾನ, ಮಸೀದಿ ಮತ್ತು ಜೈನ ಬಸದಿ ಸ್ವಚ್ಛತಾ ಕಾರ್ಯಕ್ರಮ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಅಧ್ಯಕ್ಷ ದಾವೂದ್ ಅಬೂಬಕರ್ ನೇತೃತ್ವದಲ್ಲಿ ನಡೆಯಿತು.
ಪೆರಂಪಳ್ಳಿಯ ಲೇಡಿ ಆಫ್ ಫಾತಿಮ ಚರ್ಚ್ ವಠಾರದಲ್ಲಿ ಶಾಸಕ ಕೆ. ರಘುಪತಿ ಭಟ್ ಇಡೀ ದಿನದ ಸ್ವಚ್ಛತಾ ಅಭಿಯಾನವನ್ನು ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಚರ್ಚ್ ಪರಿಸರದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಜೋಯ್ಲಸ್ ಡಿ’ಸೋಜರನ್ನು ಅಭಿನಂದಿಸಲಾಯಿತು. ಚರ್ಚಿನ ಧರ್ಮ ಗುರು ಅನಿಲ್ ಡಿಸೋಜಾ ಮತ್ತು ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಟಿ.ಜಿ.ಹೆಗ್ಡೆ, ಮಂಜುನಾಥ್ ಮಣಿಪಾಲ, ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಗೀತಾಂಜಲಿ ಸುವರ್ಣ, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಶಿವಕುಮಾರ್ ಅಂಬಲಪಾಡಿ, ವೀಣಾ ಎಸ್.ಶೆಟ್ಟಿ, ರಶ್ಮಿತಾ ಬಿ. ಶೆಟ್ಟಿ, ಅಕ್ಷಿತ್ ಶೆಟ್ಟಿ ಹೆರ್ಗ,ಆಲ್ವಿನ್ ಡಿ’ಸೋಜ, ಶೇಖ್ ಆಸಿಫ್, ಮೊಹಮ್ಮದ್ ಅಫ್ಸಲ್, ರುಡಾಲ್ಫ್ ಡಿ’ಸೋಜ ಮುಂತಾದವರು ಭಾಗವಹಿಸಿದ್ದರು.







