ಜಗಜೀವನರಾಮ ನಗರದ ವಿದ್ಯುತ್ ಚಿತಾಗಾರ ಲೋಕಾರ್ಪಣೆ
ಬೆಂಗಳೂರು, ಅ.3: ಜಗಜೀವನರಾಮ ನಗರದಲ್ಲಿ ನೂತನವಾಗಿ ನವೀಕೃತಗೊಳಿಸಿರುವ ವಿದ್ಯುತ್ ಚಿತಾಗಾರವನ್ನು ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಶನಿವಾರ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಜಗಜೀವನರಾಮ ನಗರ ವಾರ್ಡ್ ನಲ್ಲಿ ವಿದ್ಯುತ್ ಚಿತಾಗರದ ನವೀಕೃತ ಕಾಮಗಾರಿಯು ಒಂದು ವರ್ಷದಿಂದ ಸ್ಥಗಿತಗೊಂಡಿತ್ತು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಗುತ್ತಿಗೆದಾರರು ಹಗಲಿರುಳು ಕೆಲಸ ಮಾಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿದ್ದು, ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಜಗಜೀವನರಾಮ ನಗರ ವಾರ್ಡ್ ನಲ್ಲಿರುವ ವಿದ್ಯುತ್ ಚಿತಾಗಾರವನ್ನು 1.90 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ವರ್ಕ್ ಅಡಿ ನೂತನವಾಗಿ ನವೀಕೃತಗೊಳಿಸಲಾಗಿದೆ. ಚಿತಾಗಾರದ ನವೀಕರಣ, ಪೂಜೆ-ವಿಧಿ-ವಿಧಾನಗಳು ನಡೆಸಲು ಸ್ಥಳಾವಕಾಶ, ಕೂರಲು ಆಸನಗಳ ವ್ಯವಸ್ಥೆ, ವಿಶ್ರಾಂತಿ ಪಡೆಯಲು ತಂಗುದಾಣ, ಕುಡಿಯುವ ನೀರಿನ ವ್ಯವಸ್ಥೆ, ಸ್ನಾನದ ಕೊಠಡಿ, ಶೌಚಾಲಯ ವ್ಯವಸ್ಥೆ, ವಾಹನಗಳಿಗೆ ನಿಲುಗಡೆಗೆ ಸುಸಜ್ಜಿತ ಸ್ಥಳ ನಿರ್ಮಾಣ, ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ ಚಿತಾಗಾರದ ಪಕ್ಕ ಉದ್ಯಾನವನ ನಿರ್ಮಾಮ ಮಾಡುತ್ತಿದ್ದು, ಇನ್ನೊಂದು ತಿಂಗಳಲ್ಲಿ ಉದ್ಯಾನವನ್ನು ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಇಲ್ಲಿನ ಸ್ಥಳೀಯರು ವಿಲ್ಸನ್ ಗಾರ್ಡನ್ಗೆ ಹೋಗಬೇಕಿತ್ತು. ಇದೀಗ ಜಗಜೀವನ ರಾಮನಗರದಲ್ಲಿ ಅತ್ಯಾಧುನಿಕ ವಿದ್ಯುತ್ ಚಿತಾಗಾರವನ್ನು ನವೀಕರಣಗೊಳಿಸಿದ್ದು, ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಚಿತಾಗಾರಗಳಿದ್ದು, ಇದನ್ನು ಲೋರ್ಕಾಪಣೆಗೊಳಿಸಿರುವುದು ಸೇರಿ 12 ಚಿತಾಗಾರಗಳಾಗಲಿವೆ. ನಗರದಲ್ಲಿ ಪ್ರತಿನಿತ್ಯ ಕೋವಿಡ್ ಹಾಗೂ ನಾನ್-ಕೋವಿಡ್ ಸೇರಿ 165 ಮೃತ ದೇಹಗಳನ್ನು ಚಿತಾಗಾರಗಳಲ್ಲಿ ಸುಡಬಹುದಾಗಿದೆ. 12 ಚಿತಾಗಾರಗಳಲ್ಲಿ ಪಣತ್ತೂರು, ಕೂಡ್ಲು, ಕೆಂಗೇರಿ, ಮೇಡಿಅಗ್ರಹಾರ(ಯಲಹಂಕ)ದಲ್ಲಿರುವ 4 ಚಿತಾಗಾರಗಳಲ್ಲಿ ಕೋವಿಡ್ ಹಾಗೂ ಇನ್ನುಳಿದ 8 ಚಿತಾಗಾರಗಳಲ್ಲಿ ನಾನ್-ಕೋವಿಡ್ ಮೃತದೇಹಗಳನ್ನು ಸುಡಲಾಗುತ್ತಿದೆ ಎಂದರು.







