ಅ.6ರಂದು ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆ ಲೋಕಾರ್ಪಣೆ
ಬೆಂಗಳೂರು, ಅ. 5: ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆಯನ್ನು ನಾಳೆ(ಅ.6) ಸಂಜೆ ಸಂಜೆ 5 ಗಂಟೆಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಆನ್ಲೈನ್ ಮೂಲಕ ಉದ್ಘಾಟಿಸಲಿದ್ದಾರೆ. ಪ್ರೊ.ಬಿ.ಇಕ್ಬಾಲ್ ದಿಕ್ಸೂಚಿ ಭಾಷಣ ಮಾಡಲಿದ್ದು, ವೆಬಿನಾರ್ ಅಧ್ಯಕ್ಷತೆಯನ್ನು ಮಾಜಿ ಸ್ಪೀಕರ್ ಕೆ.ಆರ್.ರಮೇಶ ಕುಮಾರ್ ವಹಿಸಲಿದ್ದಾರೆ.
ಸಂವಾದದಲ್ಲಿ ವೈದ್ಯರಾದ ಡಾ.ವಾಣಿ ಕೋರಿ, ಡಾ.ಅಖಿಲಾ ವಾಸನ್, ಡಾ.ಅನಿಲ್ ಕುಮಾರ್, ಹೋರಾಟಗಾರ್ತಿ ಕೆ.ಎಸ್.ಲಕ್ಷ್ಮಿ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಅಖಿಲ್ ಕಡಿದಾಳ್ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆಯು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿದ್ದು, ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗಿನ ಅವಧಿಯಲ್ಲಿ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ ಲೋಕಾರ್ಪಣೆಯಾಗುತ್ತಿದೆ.
`ಕೊರೋನ ಕಾಲದಲ್ಲಿ ಮತ್ತು ನಂತರ' ಈ ಲೋಕಾರ್ಪಣೆ ಸರಣಿ ಕಾರ್ಯಕ್ರಮಗಳ ಸಾಮಾನ್ಯ ಥೀಮ್ ಆಗಿರುತ್ತದೆ. ಈ ಸಾಮಾನ್ಯ ಥೀಮ್ ಅಡಿಯಲ್ಲಿ ಹಲವು ಉಪಥೀಮ್ ಗಳ ಕುರಿತು ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳು ಮತ್ತು ವೆಬಿನಾರ್ ಮೂಲಕ ಸಂವಾದ ನಡೆಸಲಾಗುತ್ತದೆ. ಸಾರ್ವಜನಿಕ ಆರೋಗ್ಯ, ಮಾನವ ಹಕ್ಕುಗಳು, ಸಾಮಾಜಿಕ ಭದ್ರತೆ, ವೈಜ್ಞಾನಿಕ ಮನೋವೃತ್ತಿ, ಪ್ರದರ್ಶನ ಕಲೆಗಳು, ರಾಷ್ಟ್ರೀಯ ಮಾಧ್ಯಮ ಇವು ಉಪಥೀಮ್ ಗಳಾಗಿರುತ್ತವೆ. ಈ ವಿಷಯಗಳ ಕುರಿತು ಈಗಾಗಲೇ ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳು ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಲಾರಂಭಿಸಿವೆ.







