ವೀರರಾಣಿ ಅಬ್ಬಕ್ಕ ಭವನ- ಅಧ್ಯಯನ ಕೇಂದ್ರ ಕಾರ್ಯರೂಪಕ್ಕೆ ಒತ್ತಾಯ
ಮಂಗಳೂರು, ಅ. 6: ವೀರರಾಣಿ ಅಬ್ಬಕ್ಕ ಭವನ, ಅಬ್ಬಕ್ಕ ಅಧ್ಯಯನ ಕೇಂದ್ರ ನಿರ್ಮಾಣ ಕಾರ್ಯರೂಪಕ್ಕೆ ತರಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ, ನಗರಸಭಾ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಪ್ರಥಮ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ನಮ್ಮೆಲ್ಲರ ಹೆಮ್ಮೆ. ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪ್ರಯತ್ನದಿಂದ ತೊಕ್ಕೊಟ್ಟು ಬಸ್ ನಿಲ್ದಾಣ ಬಳಿ ರಾಣಿ ಅಬ್ಬಕ್ಕ ಭವನಕ್ಕೆ 2012-13ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅನುಮೋದನೆ ನೀಡಿದ್ದಾರೆ. 41 ಸೆಂಟ್ಸ್ ಸ್ಥಳವನ್ನು ಮೀಸಲಿಡ ಲಾಗಿದ್ದು, 8 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದೀಗ 8 ವರ್ಷ ಕಳೆದಿದ್ದು, ಭವನ ನಿರ್ಮಾಣ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂದರು.
ಮಂಗಳೂರು ವಿ.ವಿ.ಯಲ್ಲಿ ವೀರರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು ಎಂಬ ನಮ್ಮ ಸಮಿತಿಯ ಬೇಡಿಕೆಯಂತೆ ಸದಾನಂದ ಗೌಡ ಅವರು 2015-16ರಲ್ಲಿ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರೂ, ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿಲ್ಲ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕಳ ಹೆಸರಿಡುವಂತೆ ಕಳೆದ 20 ವರ್ಷಗಳಿಂದ ರಾಜ್ಯ ಸರಕಾರ, ಸಂಸದರು, ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಆದರೂ, ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ನೀಡಿಲ್ಲ ಎಂದು ಹೇಳಿದರು.
ಮಂಗಳೂರು ರೈಲ್ವೇ ಸೆಂಟ್ರಲ್/ಜಂಕ್ಷನ್ಗೆ ರಾಷ್ಟ್ರೀಯ ಹೆದ್ದಾರಿ-66 ತೊಕ್ಕೊಟ್ಟು ಫ್ಲೈ ಓವರ್ಗೆ, ಹೊಸ ಓವರ್ ಬ್ರಿಡ್ಜ್ ಜಂಕ್ಷನ್ಗೆ ವೀರರಾಣಿ ಅಬ್ಬಕ್ಕಳ ಹೆಸರಿಡುವ ಬಗ್ಗೆ ಇತ್ತೀಚೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಅಧ್ಯಕ್ಷ ದಿನಕರ ಉಳ್ಳಾಲ್, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ಇದ್ದರು.
ಜಿಲ್ಲಾಧಿಕಾರಿ ಕಚೇರಿ ಎದುರು ಅಬ್ಬಕ್ಕೆ ಪ್ರತಿಮೆ ಆಗಲಿ
ದ.ಕ.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಹಳೆ ಕೆಂಪು ಕಲ್ಲಿನ ಕಟ್ಟಡ ಪೋರ್ಚುಗೀಸರ ಅವಧಿಯಲ್ಲಿ ರಾಣಿ ಅಬ್ಬಕ್ಕ ಕಟ್ಟಿದ್ದರ ಕುರುಹಾಗಿದೆ. ಆ ನೆನಪಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ವೃತ್ತದಲ್ಲಿ ಅಬ್ಬಕ್ಕ ರಾಣಿ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಜಯರಾಮ ಶೆಟ್ಟಿ ಹೇಳಿದರು.







