ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಹಣ ದುರುಪಯೋಗ ಆರೋಪ: ಸೂಕ್ತ ತನಿಖೆಗೆ ಎಸ್ಐಒ ಆಗ್ರಹ
ಬೆಂಗಳೂರು, ಅ.6: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿ ವೇತನ ಹಾಗೂ ಅರಿವು ಸಾಲದ ಹಣ ದುರುಪಯೋಗವಾಗಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ರಾಜ್ಯ ಸರಕಾರ ಈ ಬಗ್ಗೆ ಕೂಡಲೇ ಸೂಕ್ತ ತನಿಖೆಗೆ ಆದೇಶಿಸಬೇಕೆಂದು ಎಸ್ಐಒ ಆಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು, ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸುಮಾರು 5.2 ಕೋಟಿ ಹಣವನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ದುರುಪಯೋಗ ಮಾಡಿ, ಬೇರೆಡೆ ವರ್ಗಾಯಿಸಿರುವ ಬಗ್ಗೆ ಆರೋಪವಿದೆ. ಈಗಾಗಲೇ ವಿದ್ಯಾರ್ಥಿಗಳು 20019-20ನೇ ಸಾಲಿನ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ.
ಉನ್ನತ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯ ನೀಡುವ ಅರಿವು-2 ಯೋಜನೆಯ ಸುಮಾರು 50 ಕೋಟಿ ರೂ. ದುರುಪಯೋಗ ಆಗಿರುವುದರ ಬಗ್ಗೆಯೂ ಆರೋಪವಿದ್ದು, ಈ ಬಗ್ಗೆ ಈಗಾಗಲೇ 2019ರಲ್ಲಿ ಪ್ರಕರಣ ದಾಖಲಾಗಿದ್ದರೂ ಸೂಕ್ತ ತನಿಖೆಯಾಗಿಲ್ಲ. ಆದ್ದರಿಂದ ವಿದ್ಯಾರ್ಥಿ ವೇತನ ಹಾಗೂ ಅರಿವು ಸಾಲದ ಹಣ ದುರುಪಯೋಗದ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಿ, ವಿದ್ಯಾರ್ಥಿ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಎಸ್ಐಒ ಆಗ್ರಹಿಸಿದೆ.





