ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಗೆ ದಾಖಲು
ಬೆಂಗಳೂರು, ಅ.7: ಡಿ.ಜೆ.ಹಳ್ಳಿ ಹಾಗು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ, ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರು ಬುಧವಾರ ಅಧಿಕ ರಕ್ತದೊತ್ತಡದ ಪರಿಣಾಮ ಹೆಬ್ಬಾಳದ ಸ್ಪತ್ರೆಗೆ ದಾಖಲಾಗಿದ್ದಾರೆ.
ಡಿ.ಜೆ.ಹಳ್ಳಿ ಹಾಗು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ಇವರನ್ನು ಒಮ್ಮೆ ವಿಚಾರಣೆ ನಡೆಸಿದ್ದರು. ಮತ್ತೊಮ್ಮೆ ವಿಚಾರಣೆ ಎದುರಿಸಲು ಸೂಚಿಸಿದಾಗ ಕೊರೋನ ಕಾರಣದಿಂದ ಸಂಪತ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಪೊಲೀಸರು ಕರೆಯದಿದ್ದರೂ ಅ.6ರಂದು ವಿಚಾರಣೆಗೆ ಹಾಜರಾಗುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು. ಆದರೆ ಮತ್ತೆ ಬಿಪಿ ನೆಪ ಹೇಳಿ ನಿನ್ನೆ ವಿಚಾರಣೆಗೆ ಹಾಜರಾಗದೇ ಆಸ್ಪತ್ರೆ ಸೇರಿಕೊಂಡಿದ್ದಾರೆ.
ಗಲಭೆ ಪ್ರಕರಣ ಸಂಬಂಧ ಇದೇ 14ರ ಒಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿಸಿಬಿ ಸಿದ್ಧತೆ ನಡೆಸಿದೆ. ದೋಷಾರೋಪ ಪಟ್ಟಿಯಲ್ಲಿ ರಾಜಕೀಯ ಹುನ್ನಾರದ ಮಾಹಿತಿ ನಮೂದು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.