ಸಿಬಿಐ ದಾಳಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲ್ಲ: ಡಿ.ಕೆ.ಶಿವಕುಮಾರ್
![ಸಿಬಿಐ ದಾಳಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲ್ಲ: ಡಿ.ಕೆ.ಶಿವಕುಮಾರ್ ಸಿಬಿಐ ದಾಳಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲ್ಲ: ಡಿ.ಕೆ.ಶಿವಕುಮಾರ್](https://www.varthabharati.in/sites/default/files/images/articles/2020/10/7/262360-1602081717.jpg)
ಬೆಂಗಳೂರು, ಅ.7: ನಮ್ಮ ಮನೆ ಮೇಲೆ ಆದ ಸಿಬಿಐ ದಾಳಿಯನ್ನು ಮುಂದಿಟ್ಟುಕೊಂಡು ಉಪ ಚುನಾವಣಾ ಪ್ರಚಾರದ ಕಣಕ್ಕಿಳಿಯುವುದಿಲ್ಲ. ರಾಜ್ಯದ ಜನತೆ ಹಾಗೂ ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಮತದಾರರು ಇದನ್ನೆಲ್ಲ ನೋಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಕುಸುಮಾ ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಸಂಬಂಧ ನಾವೆಲ್ಲ ಒಟ್ಟಾಗಿ ಚರ್ಚಿಸಿ ಆವರ ಹೆಸರನ್ನು ಹೈಕಮಾಂಡ್ಗೆ ಶಿಫಾರಸು ಮಾಡಿದ್ದೆವು. ನಮ್ಮ ಶಿಫಾರಸನ್ನು ಒಪ್ಪಿ ಕಾಂಗ್ರೆಸ್ ಹೈಕಮಾಂಡ್, ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ ಎಂದರು.
ಚುನಾವಣೆಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. ತಂತ್ರ, ಪ್ರತಿತಂತ್ರ ಏನಿಲ್ಲ. ರಾಜ್ಯದ ಜನ ಈ ಸರಕಾರದ ಕಾರ್ಯವೈಖರಿಯನ್ನು ನೋಡುತ್ತಿದ್ದಾರೆ. ಈ ಸರಕಾರಕ್ಕೆ ಯಾವ ಸಂದೇಶವನ್ನು ಕಳುಹಿಸಬೇಕೋ ಆ ಸಂದೇಶವನ್ನು ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ. ಶೀಘ್ರವೆ ಉಪ ಚುನಾವಣೆಯ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಮಾತನಾಡಿ, ಆರ್.ಆರ್.ನಗರಕ್ಕೆ ಕುಸುಮಾ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಜಯಚಂದ್ರರ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕುಸುಮಾ ಬಹಳ ಉತ್ತಮ ಅಭ್ಯರ್ಥಿ, ಸುಶಿಕ್ಷಿತರಾಗಿದ್ದಾರೆ. ಜಯಚಂದ್ರ ಕೂಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ ಎಂದರು.
ಡಿಕೆಶಿ ಮೇಲೆ ಸಿಬಿಐ ದಾಳಿಯಾಗಿರುವುದನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಆರ್.ಆರ್.ನಗರದಲ್ಲಿ ಬಿಜೆಪಿ, ಜೆಡಿಎಸ್ ಈವರೆಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಶಿರಾದಲ್ಲೂ ಅವರಿಗೆ ಸೂಕ್ತ ಅಭ್ಯರ್ಥಿಗಳು ಸಿಕ್ಕಿಲ್ಲ. ಈ ಸರಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುತ್ತೇವೆ. ಎರಡೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.