ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಸಹಿತ 12 ಪ್ರತಿಭಟನಾಕಾರರ ಬಂಧನ
ಅಹ್ಮದಾಬಾದ್ ನಲ್ಲಿ ಹತ್ರಸ್ ಸಂತ್ರಸ್ತೆಗೆ ನ್ಯಾಯ ಕೋರಿ ರ್ಯಾಲಿ
ಅಹ್ಮದಾಬಾದ್: ಹತ್ರಸ್ ಸಂತ್ರಸ್ತೆಗೆ ನ್ಯಾಯ ಕೋರಿ ನಡೆದ ರ್ಯಾಲಿಗೆ ಮುಂಚಿತವಾಗಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ, ಕಾರ್ಯಕಾರಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಹಾಗೂ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಸಹಿತ 12 ಜನ ಪ್ರತಿಭಟನಾಕಾರರನ್ನು ಗುಜರಾತ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹತ್ರಸ್ ಸಂತ್ರಸ್ತೆ ಯುವತಿಗೆ ನ್ಯಾಯ ಕೋರಿ ಹಾಗು ಗುಜರಾತ್ ಹಾಗೂ ಇಡೀ ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಿಸಿ ವಿವಿಧ ಸ್ವಯಂಸೇವಾ ಸಂಸ್ಥೆಗಳು ಪ್ರತೀಕಾರ ರ್ಯಾಲಿಯನ್ನು ಅಹ್ಮದಾಬಾದ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದವು. ಈ ರ್ಯಾಲಿಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.
ವಡ್ಗಾಮ್ ಕ್ಷೇತ್ರದ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ರ್ಯಾಲಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಹತ್ರಸ್ ನಲ್ಲಿ ಸಂತ್ರಸ್ತ ಯುವತಿಯ ಕುಟುಂಬದ ಕುರಿತು ಅಸೂಕ್ಷ್ಮವಾಗಿ ವರ್ತಿಸುತ್ತಿರುವ ಬಿಜೆಪಿ ಆಡಳಿತದ ಉತ್ತರಪ್ರದೇಶ ಸರಕಾರವನ್ನು ಮೆವಾನಿ ಮಂಗಳವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ನಡೆದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.