ಹರ್ಯಾಣ: ತನ್ನದೇ ಸರಕಾರ ವಿರುದ್ಧ ಪ್ರತಿಭಟಿಸಿದ ಬಿಜೆಪಿ ಶಾಸಕ
ಚಂಡಿಗಡ: ಆಡಳಿತಾರೂಢ ಬಿಜೆಪಿಯ ಶಾಸಕರೊಬ್ಬರು ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಮುಂದಿಟ್ಟುಕೊಂಡು ವಿಧಾನಸಭೆಯ ಹೊರಗೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿಯ ಅಂಬಾಲದ ಶಾಸಕ ಅಸೀಮ್ ಗೋಯಲ್ ವಿಧಾನಸಭೆಗೆ ತೆರಳಿ ಸದನದ ಹೊರಗೆ ಕುಳಿತು ಸಾಂಕೇತಿಕ ಪ್ರತಿಭಟನೆ ನಡೆಸಿದರು.ಒಂದು ವೇಳೆ ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಸೋಮವಾರ ತನ್ನ ಬೆಂಬಲಿಗರ ಜೊತೆಗೂಡಿ ಭಾರೀ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
" ನಾನು ಸರಕಾರದ ವಿರುದ್ಧ ಪ್ರತಿಭಟಿಸುತ್ತಿಲ್ಲ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರ)ಪಿ.ಕೆ.ದಾಸ್ ಓರ್ವ ಅಹಂವಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ನಾನು ಪ್ರತಿಭಟಿಸುತ್ತಿದ್ದೇನೆ. ನಾನು ಚಂಡಿಗಢಕ್ಕೆ ಪಿಕ್ನಿಕ್ಗೆ ಬಂದಿಲ್ಲ. ನನ್ನ ಕ್ಷೇತ್ರ ಹಾಗೂ ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಲು ಬಂದಿರುವೆ. ನನ್ನ ಕ್ಷೇತ್ರದಲ್ಲಿ 5 ಲಕ್ಷ ಜನರನ್ನು ನಾನು ಪ್ರತಿನಿಧಿಸುತ್ತಿರುವೆ. ಭತ್ತದ ಬೆಳೆಯನ್ನು ಹೆಚ್ಚು ಸಮಯ ಮನೆಯಲ್ಲಿ ಸಂಗ್ರಹಿಸಿಡಲು ಸಾಧ್ಯವಿಲ್ಲ. ರಾಜ್ಯ ಸರಕಾರದ ಪೋರ್ಟಲ್ನೊಂದಿಗೆ ನೋಂದಾವಣೆಯಾಗಲು ರೈತರು ಪರದಾಡುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಯಾರೂ ಕೇಳುವವರಿಲ್ಲವಾಗಿದೆ'' ಎಂದು ಸುದ್ದಿಗಾರರಿಗೆ ಗೋಯಲ್ ಹೇಳಿದ್ದಾರೆ.