ಇಬ್ಬರು ಶಂಕಿತ ಉಗ್ರರನ್ನು 10 ದಿನ ಎನ್ಐಎ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಬೆಂಗಳೂರು, ಅ.8: ಐಎಸ್ಐಎಸ್ ಸಂಘಟನೆಗೆ ಸೇರಿದ್ದಾರೆ ಎಂಬ ಆರೋಪದಡಿ ಇಬ್ಬರು ಶಂಕಿತರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದು, ನಗರದ ವಿಶೇಷ ಎನ್ಐಎ ಕೋರ್ಟ್ ಇವರನ್ನು 10 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿ ಆದೇಶಿಸಿದೆ.
ತಮಿಳುನಾಡು ಮೂಲದ ಅಹ್ಮದ್ ಅಬ್ದುಲ್ ಖಾದರ್(40), ಬೆಂಗಳೂರಿನ ಫ್ರೆಜರ್ ಟೌನ್ ನಿವಾಸಿ ಇರ್ಫಾನ್ ನಾಸಿರ್(33) ಬಂಧಿತರು.
ಬಂಧಿತ ಅಹ್ಮದ್ ಅಬ್ದುಲ್ ಖಾದರ್ ಚೆನ್ನೈನ ಬ್ಯಾಂಕ್ವೊಂದರಲ್ಲಿ ವ್ಯವಹಾರಿಕ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಇರ್ಫಾನ್ ನಾಸೀರ್ ಬೆಂಗಳೂರಿನಲ್ಲಿ ಅಕ್ಕಿ ವ್ಯಾಪಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತರ ವಿರುದ್ಧ 2020ರ ಸೆ.19ರಂದು ಎನ್ಐಎ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಬಸವನಗುಡಿಯ ಅಪಾರ್ಟ್ಮೆಂಟ್ನಲ್ಲಿದ್ದ ಅಬ್ದುಲ್ ರೆಹಮಾನ್ನನ್ನು ಅಧಿಕಾರಿಗಳು ಬಂಧಿಸಿದ್ದರು. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಕುರಿತು ಬಾಯ್ಬಿಟ್ಟಿದ್ದಾನೆ.
ಬಂಧಿತ ಅಬ್ದುಲ್ ಖಾದರ್, ಇರ್ಫಾನ್ ನಾಸೀರ್ ಮತ್ತು ಇತರರು ಸೇರಿ ವಾಟ್ಸ್ ಆ್ಯಪ್ ಗ್ರೂಪ್ವೊಂದನ್ನು ಮಾಡಿಕೊಂಡಿದ್ದು, ಅದರಲ್ಲಿ ನಗರದ ಯುವಕರನ್ನು ಒಗ್ಗೂಡಿಸಿ ಪ್ರಚೋದಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಅಹ್ಮದ್ ಅಬ್ದುಲ್ ಖಾದರ್ ಹಾಗೂ ಇರ್ಫಾನ್ ನಾಸಿರ್ ಇಬ್ಬರನ್ನು ಎನ್ಐಎ ಅಧಿಕಾರಿಗಳು ಬಂಧಿಸಿ, ಎಲೆಕ್ಟ್ರಾನಿಕ್ ಸಾಧನಗಳನ್ನು ಒಳಗೊಂಡಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬೆಂಗಳೂರಿನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ 10 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.