ಶಾಲೆಗಳನ್ನು ಆರಂಭಿಸುವ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಹೀಗಿದೆ....

ಬೆಂಗಳೂರು, ಅ.9: ಶಾಲಾ-ಕಾಲೇಜುಗಳನ್ನು ಪುನಾರಾಂಭಿಸುವ ಸಂಬಂಧ ಸರಕಾರ ನಿರ್ಧರಿಸಲಿ. ಸರಕಾರದ ತೀರ್ಮಾನಕ್ಕೆ ನಾವೇಕೆ ಮಧ್ಯಪ್ರವೇಶ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಶಾಲೆ ಆರಂಭದ ಬಗ್ಗೆ ಶಿಕ್ಷಕರು, ಪೋಷಕರ ಸಲಹೆ, ಅಭಿಪ್ರಾಯ ಪಡೆಯಲಿ. ಸರಕಾರ ಯಾವ ತೀರ್ಮಾನ ಮಾಡುತ್ತದೆಯೋ ಮಾಡಲಿ. ನಾನೇಕೆ ಮಧ್ಯಪ್ರವೇಶ ಮಾಡಲಿ ಎಂದು ತಿಳಿಸಿದರು.
ಚುನಾವಣಾ ತಯಾರಿ ಕುರಿತು ಪ್ರತಿಕ್ರಿಯಿಸಿ ಮಹಿಳಾ, ಓಬಿಸಿ ಮತ್ತು ಸೋಶಿಯಲ್ ಮೀಡಿಯಾ ಘಟಕಗಳ ಸಭೆ ಮಾಡಿದ್ದೇನೆ. ಪಕ್ಷ ಸಂಘಟನೆ ಸಲುವಾಗಿ ಸಭೆ ಮಾಡಿಸಿದ್ದೇವೆ. ಕೇಡರ್ ಬೇಸ್ ಪಾರ್ಟಿ ಕಟ್ಟುವುದಕ್ಕೆ ಒತ್ತು ಕೊಡುತ್ತಿದ್ದೇವೆ. ಎಲ್ಲರೂ ಇಲ್ಲಿ ಕಾರ್ಯಕರ್ತರು, ನಾನು ಕೂಡ ಇಲ್ಲಿ ಕಾರ್ಯಕರ್ತ. ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ನಾಳೆ ಮಂಡ್ಯದಲ್ಲಿ ರೈತ ಧ್ವನಿ ಕಾರ್ಯಕ್ರಮ ಮಾಡ್ತಿದ್ದೇವೆ. ಕೇಂದ್ರ ಸರಕಾರ ಜಾರಿ ಮಾಡಿರುವ ರೈತ ವಿರೋಧಿ ತಿದ್ದುಪಡಿ ಕಾಯಿದೆಗಳ ವಿರುದ್ಧ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದೇವೆ. ಸಮಾವೇಶಕ್ಕೆ ರಾಜ್ಯದ ಉಸ್ತುವಾರಿ ಸುರ್ಜೇವಾಲಾ ಬರುತ್ತಿದ್ದಾರೆ. ಅಲ್ಲಿ ಸಂಗ್ರಹವಾಗುವ ಸಹಿಗಳನ್ನು ರಾಷ್ಟ್ರಪತಿಗೆ ಕಳುಹಿಸಿಕೊಡಲಿದ್ದೇವೆ ಎಂದರು.





