ಯುವತಿಯ ತಂದೆ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ಎಐಎಡಿಎಂಕೆ ಶಾಸಕ-ಬ್ರಾಹ್ಮಣ ಯುವತಿಯ ವಿವಾಹ ಪ್ರಕರಣ
ಚೆನ್ನೈ, ಅ. 8: ಎಐಎಡಿಎಂಕೆ ಶಾಸಕ-ಬ್ರಾಹ್ಮಣ ಯುವತಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ತಂದೆ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. ಅಲ್ಲದೆ ಯುವತಿಗೆ ತನ್ನ ಪತಿಯೊಂದಿಗೆ ತೆರಳಲು ಅವಕಾಶ ನೀಡಿದೆ.
ಅರ್ಚಕರಾಗಿರುವ ಯುವತಿಯ ತಂದೆ ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ‘‘ತಾನು ಪತಿಯೊಂದಿಗೆ ತೆರಳಲು ಬಯಸುತ್ತೇನೆ’’ ಎಂದು ಯುವತಿ ನ್ಯಾಯಾಧೀಶರಿಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅನುಮತಿ ನೀಡಿದರು. ಈ ಸಂದರ್ಭ ಯುವತಿ ತನ್ನನ್ನು ಅಪಹರಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದರು. ನಾವಿಬ್ಬರು ವಯಸ್ಕರು. ಕೆಲವು ತಿಂಗಳಿಂದ ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ. ನಮ್ಮ ವಿವಾಹ ಸಮ್ಮತಿಯಿಂದ ನೆರವೇರಿದೆ ಎಂದು ಹೇಳುವ ವೀಡಿಯೊವೊಂದನ್ನು ದಂಪತಿ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ್ದರು. ಪ್ರಭು ಅವರ ಬಗ್ಗೆ ನಮ್ಮ ಕುಟುಂಬಕ್ಕೆ ದಶಕದ ಹಿಂದಿನಿಂದಲೇ ತಿಳಿದಿದೆ. ಸೋಮವಾರ ನಮ್ಮ ವಿವಾಹವಾಗುವ ವರೆಗೆ ಅವರು ನಮ್ಮ ಮನೆಗೆ ಬರುತ್ತಿದ್ದರು ಎಂದು ಯುವತಿ ಸೌಂದರ್ಯಾ ಹೇಳಿದ್ದಾರೆ.