ಮಹಿಷ ದೊರೆಗೆ ಪುಷ್ಪಾರ್ಚನೆ ಮೂಲಕ 'ಮಹಿಷ ದಸರಾ' ಆಚರಣೆ: ಮಾಜಿ ಮೇಯರ್ ಪುರುಷೋತ್ತಮ್

ಮೈಸೂರು,ಅ.11: ಮರೆತು ಹೋದ ಮೈಸೂರಿನ ಪ್ರಾಚೀನ ಅಸ್ಮಿತೆಯನ್ನು ಸ್ಮರಿಸುವ ದಿನ ಮತ್ತು ಭಾರತದ ಮೂಲನಿವಾಸಿಗಳ ದೊರೆ ಮಹಿಷ ರಾಜನ ನೆನಪಿಗಾಗಿ ಅ.15 ರಂದು ಮಹಿಷ ದಸರಾ ಆಚರಣೆ ಮಾಡಲಾಗುವುದು ಎಂದು ಮಹಿಷ ದಸರಾ ಆಚರಣಾ ಸಮಿತಿ ಮತ್ತು ಅಹಿಂದ ಕುಲಗಳ ಮುಖ್ಯಸ್ಥ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಅಹಿಂದ ಕುಲಗಳಿಂದ ಮಹಿಷ ದಸರಾ-2020 ಆಚರಣಾ ಸಮಿತಿ ವತಿಯಿಂದ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಮೂಲ ಸಂಸ್ಕೃತಿ ಮತ್ತು ಮೂಲ ಆಚರಣೆಯನ್ನು ಎತ್ತಿಹಿಡಿಯುವ ಸಲುವಾಗಿ ಕಳೆದ 6 ವರ್ಷಗಳಿಂದಲೂ ಮಹಿಷ ದಸರಾ ಆಚರಣೆ ಮಾಡಿಕೊಂಡು ಬರುತ್ತಿದ್ದು, ಅದರಂತೆ ಈ ಬಾರಿಯೂ ಕೋವಿಡ್ ನಿಯಮಾವಳಿ ಪ್ರಕಾರವೇ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಅಂದು ಮಹಿಷ ಮಂಡಲದಲ್ಲಿರುವ ಮಹಿಷ ದೊರೆಯ ಪ್ರತಿಮೆಗೆ ಬೆ.11 ಗಂಟೆಗೆ ಮಾಲಾರ್ಪಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಸಮಾಜದ ಗಣ್ಯರು, ಬುದ್ಧ ಬಂತೇಜಿಗಳು, ಸ್ವಾಮೀಜಿಗಳು, ಪ್ರೊಫೆಸರ್ ಗಳು, ಸಾಹಿತಿಗಳು, ಪ್ರಗಿತಪರ ಚಿಂತಕರು ಹಾಗೂ ವಿವಿಧ ಅಹಿಂದ ಸಂಘಟೆಯ ಧುರೀಣರು ಭಾವಹಿಸಲಿದ್ದಾರೆ ಎಂದು ಹೇಳಿದರು.
ಕೋವಿಡ್ ಇರುವುದರಿಂದ ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯವಾಗಿದ್ದು, ಮಹಿಷನ ಅಭಿಮಾನಿಗಳು ಮಹಿಷ ಮಂಡಲಕ್ಕೆ ಬರದೆ ತಮ್ಮ ತಮ್ಮ ಊರುಗಳಲ್ಲೇ ಮಹಾನಾಯಕ ಅಂಬೇಡ್ಕರ್ ಅವರ ಫ್ಲೆಕ್ಸ್ ಪಕ್ಕದಲ್ಲಿ ಮಹಿಷನ ಪೋಟೋ ಇಟ್ಟು ಪುಷ್ಪಾರ್ಚನೆ ಮಾಡಿ ನಮ್ಮ ಇತಿಹಾಸವನ್ನು ಮರುಕಳಿಸಬೇಕು ಎಂದು ಮನವಿ ಮಾಡಿದರು.
ಕಳೆದ ವರ್ಷ ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸಿ ಗೊಂದಲವನ್ನು ಕೆಲವರು ಉಂಟು ಮಾಡಿದರು. ಹಾಗಾಗಿ ಈ ಬಾರಿ ಮುಂಚಿತವಾಗಿಯೇ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರ ಅನುಮತಿಗಾಗಿ ಲಿಖಿತ ಪತ್ರ ನೀಡಿದ್ದೇವೆ. ನಾಳೆ ಅಥವಾ ನಾಳಿದ್ದು, ಅನುಮತಿ ನೀಡಬಹುದು. ಅವರ ಮಾರ್ಗಸೂಚಿ ಮತ್ತು ಅವರ ನಿಯಮಾನುಸಾರವೇ ನಾವುಗಳು ನಡೆದುಕೊಂಡು ನಮ್ಮ ಮೂಲ ದೊರೆಗೆ ಗೌರವ ಸಲ್ಲಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಲೇಖಕ ಸಿದ್ದಸ್ವಾಮಿ, ಸೋಮಯ್ಯ ಮಲೆಯೂರು, ಚಿಕ್ಕಂದಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ
ಭಾರತದ ಮೂಲನಿವಾಸಿಗಳ ಆಚರಣೆಗೆ ಯಾರೇ ಅಡ್ಡಿಪಡಿಸಿದರು ಅ.15 ರಂದು ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ ಎಂದು ಪುರುಷೋತ್ತಮ್ ತಿಳಿಸಿದರು.ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ಈಗಾಗಲೇ ಲಖಿತ ದೂರಪದಲ್ಲಿ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಪತ್ರನೀಡಲಾಗಿದೆ. ಅವರ ಅನುಮತಿಗಾಗಿ ಕಾಯುತ್ತಿದ್ದೇವೆ. ಅವರು ಅನುಮತಿ ಕೊಡಲಿ ಬಿಡಲಿ ನಾವೂ ನಮ್ಮ ದೊರೆಯ ದಸರಾವನ್ನು ಆಚರಣೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.
ಅಧಿಕಾರ ಇದೆ ಎಂದು ನಮ್ಮ ಆಚರಣೆಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಭಾರತದಲ್ಲಿ ಅವರವರ ಸಂಸ್ಕೃತಿ ಆಚಾರ ವಿಚಾರ ವ್ಯಕ್ತಪಡಿಸುವ ಹಕ್ಕಿದೆ. ಅದನ್ನು ಮೊಟಕುಗೊಳಿಸುವ ಅಧಿಕಾರ ಯಾರಿಗೂ ಇಲ್ಲ, ನಮ್ಮ ಸಂಸ್ಕೃತಿ ಮತ್ತು ಆಚಾರವನ್ನು ಎತ್ತಿ ಹಿಡಿಯುವ ಸಲುವಾಗಿ ಮತ್ತು ಇಂದಿನ ಯುವ ಪೀಳಿಗೆಗೆ ನಮ್ಮ ಇತಿಹಾಸವನ್ನು ಪರಿಚಯಿಸುವ ಸಲುವಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ. ಇದಕ್ಕೆ ಅಡ್ಡಿಪಡಿಸಿದರೆ ನಾವು ಸುಮ್ಮನಾಗುವುದಿಲ್ಲ ಎಂದು ಹೇಳಿದರು.







