ಕೆರೆ ಒತ್ತುವರಿ ಆರೋಪ: ಸರ್ವೇ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು, ಅ.11: ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಹೃದಯ ಭಾಗದಲ್ಲಿರುವ ಕೆರೆಯನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಸರಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಸರ್ವೇ ನಡೆಸಿ ವರದಿ ನೀಡುವಂತೆ ಸ್ಥಳೀಯ ತಹಶೀಲ್ದಾರ್ ಗೆ ನಿರ್ದೇಶಿಸಿದೆ.
ಈ ಕುರಿತು ಸ್ಥಳೀಯ ನಿವಾಸಗಳಾದ ಕಿರಣ್ ಗೌಡ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. ತಹಶೀಲ್ದಾರ್ ಸರ್ವೇ ಅಧಿಕಾರಿಗಳ ಮೂಲಕ ಇಡೀ ಕೆರೆಯನ್ನು ಸರ್ವೇ ಮಾಡಿಸಿ ಒತ್ತುವರಿಯಾಗಿರುವ ಭೂಮಿ ಎಷ್ಟು ಎಂಬುದನ್ನು ಗುರುತಿಸಬೇಕು. ಒಂದು ವೇಳೆ ಅರ್ಜಿದಾರರು ಹೇಳಿರುವಂತೆ ಒತ್ತುವರಿಯಾಗಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಿ ಒತ್ತುವರಿ ತೆರವು ಮಾಡಿ, ಆ ಕುರಿತ ವರದಿಯನ್ನು ನ.11ರೊಳಗೆ ಸಲ್ಲಿಸಬೇಕು ಎಂದು ಪೀಠ ತನ್ನ ನಿರ್ದೇಶನದಲ್ಲಿ ತಿಳಿಸಿದೆ.
ಸಾಗರ ಮಧ್ಯ ಭಾಗದಲ್ಲಿರುವ ಗಣಪತಿ ಕೆರೆಯಲ್ಲಿ ಹೂಳು ತುಂಬಿದ್ದು ನಿಧಾನವಾಗಿ ಮುಚ್ಚಿಕೊಳ್ಳುತ್ತಿದೆ. ಇದೇ ವೇಳೆ ಕೆಲ ಸ್ಥಳೀಯ ಪ್ರಭಾವಿಗಳು ಕೆರೆಗೆ ಸೇರಿದ ಜಾಗವನ್ನು ಅಲ್ಲಲ್ಲಿ ಒತ್ತುವರಿ ಮಾಡಿದ್ದಾರೆ. ಕೆರೆ ಒತ್ತುವರಿ ತೆರೆವು ಮಾಡಲು ಅಧಿಕಾರಿಗಳು ಕಟ್ಟುನಿಟ್ಟಾದ ಕ್ರಮ ಜರುಗಿಸಿಲ್ಲ. ಹೀಗಾಗಿ, ಕೆರೆ ಒತ್ತುವರಿ ತೆರವು ಮಾಡುವಂತೆ ಹಾಗೂ ಸಂರಕ್ಷಿಸುವಂತೆ ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ನಿರ್ದೇಶಿಸಿಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.





