ಸರಕಾರಿ ಉದ್ಯೋಗಿಗಳಿಗೆ ವಿಶೇಷ ಉತ್ಸವ ಮುಂಗಡ ಯೋಜನೆ ಘೋಷಿಸಿದ ವಿತ್ತ ಸಚಿವೆ ಸೀತಾರಾಮನ್
* ಕೇಂದ್ರ ಉದ್ಯೋಗಿಗಳಿಗೆ 10 ಸಾವಿರ ರೂ. ಬಡ್ಡಿರಹಿತ ಮುಂಗಡ ಹಣದ ಆಫರ್
ಹೊಸದಿಲ್ಲಿ,ಸೆ.12: ಕೊರೋನ ಹಾವಳಿ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಕುಂಠಿತಗೊಂಡಿರುವ ಗ್ರಾಹಕ ಬೇಡಿಕೆಗಳಿಗೆ ಉತ್ತೇಜನ ನೀಡುವ ಪ್ರಯತ್ನವಾಗಿ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಎಲ್ಟಿಸಿ ನಗದು ವೋಚರ್ಗಳು ಹಾಗೂ ಹಬ್ಬಗಳ ಪ್ರಯುಕ್ತ ವಿಶೇಷ ಮುಂಗಡ ಪಾವತಿ ಯೋಜನೆಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರಕಾರಿ ನೌಕರರಿಗೆ ಈ ಕೊಡುಗೆಗಳನ್ನು ಅವರು ಪ್ರಕಟಿಸಿದರು.
ರಜಾ ಪ್ರವಾಸ ರಿಯಾಯಿತಿ (ಎಲ್ಟಿಸಿ )ಯ ಬದಲಿಗೆ ಕೇಂದ್ರ ಸರಕಾರಿ ನೌಕರರಿಗೆ ನಗದು ವೋಚರ್ ನೀಡಲಾಗುವುದು. ಈ ಸೌಲಭ್ಯದಡಿ ಸರಕಾರಿ ನೌಕರರು ಶೇ.12 ಅಥವಾ ಅದಕ್ಕಿಂತ ಅಧಿಕ ಜಿಎಸ್ಟಿ ತೆರಿಗೆ ಇರುವ ಸಾಮಾಗ್ರಿಗಳನ್ನು ಖರೀದಿಸ ಬಹುದೆಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಜಿಎಸ್ಟಿ ನೋಂದಾಯಿತ ಮಳಿಗೆಗಳಲ್ಲಿ ಡಿಜಿಟಲ್ ವಿಧಾನದಲ್ಲಿ ಈ ಖರೀದಿಗಳನ್ನು ಮಾಡಬಹುದಾಗಿದೆಯೆಂದು ಅವರು ತಿಳಿಸಿದರು.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೇಂದ್ರ ಸರಕಾರದ ಉದ್ಯೋಗಿಗಳು ತಮ್ಮ ಆಯ್ಕೆಯ ಸ್ಥಳಕ್ಕೆ ಪ್ರವಾಸಕ್ಕೆ ತೆರಳಲು ಅವಕಾಶವಿದೆ. ಆದರೆ ಕೊರೋನ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಸರಕಾರಿ ಉದ್ಯೋಗಿಗಳು ಎಲ್ಟಿಸಿ ಸೌಲಭ್ಯದಡಿ ಪ್ರವಾಸ ಕೈಗೊಳ್ಳಲು ಸಾಧ್ಯವಾಗದ ಕಾರಣ ಅವರಿಗೆ ಕ್ಯಾಶ್ವೋಚರ್ಗಳ ಕೊಡುಗೆಗಳನ್ನು ನೀಡಲಾಗಿದೆ. ಅದನ್ನು ಅವರು2020ರ ಮಾರ್ಚ್ 31ರೊಳಗೆ ಬಳಸಿಕೊಳ್ಳಬಹುದಾಗಿದೆ ಎಂದು ಸೀತಾರಾಮನ್ ಹೇಳಿದರು.
ಕೇಂದ್ರ ಸರಕಾರವು ಎಲ್ಟಿಸಿ ನಗದು ವೋಚರ್ಗಳಿಗಾಗಿ ಒಟ್ಟು 5,675 ಕೋಟಿ ರೂ.ಗಳನ್ನು ಪಾವತಿಸಲಿದೆ. ಕೇಂದ್ರೀಯ ಸಾರ್ವಜನಿಕರಂಗದ ಘಟಕಗಳು ಹಾಗೂ ಸಾರ್ವಜನಿಕ ರಂಗದ ಉದ್ಯಮಗಳು 1,900 ಕೋಟಿ ರೂ. ನೀಡಲಿದೆ ಎಂದು ಸೀತಾರಾಮನ್ ತಿಳಿಸಿದರು.
ಹಬ್ಬದ ವಿಶೇಷ ಬಡ್ಡಿರಹಿತ ಮುಂಗಡ ಹಣ ಪಾವತಿ
ಇದೇ ವೇಳೆ ಆರ್ಥಿಕತೆಗೆ ಚೈತನ್ಯ ತುಂಬುವುದಕ್ಕಾಗಿ ಗ್ರಾಹಕರಲ್ಲಿ ಖರೀದಿ ಸಾಮರ್ಥ್ಯವನ್ನು ಉತ್ತೇಜಿಸುವ ಯೋಜನೆಯ ಅಂಗವಾಗಿಕೇಂದ್ರ ಸರಕಾರದ ಎಲ್ಲಾ ಅಧಿಕಾರಿಗಳು ಹಾಗೂ ನೌಕರರಿಗೆ ಹಬ್ಬದ ವಿಶೇಷವಾಗಿ ಬಡ್ಡಿರಹಿತ ಮುಂಗಡ ಹಣವನ್ನು ಘೋಷಿಸಿದೆ.
ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಂಡ ಬಳಿಕ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಹಬ್ಬದ ಮುಂಗಡ ಹಣ ಪಾವತಿಸುವ ಪದ್ಧತಿಯನ್ನು ಕೈಬಿಡಲಾಗಿತ್ತೆಂದು ನಿರ್ಮಲಾ ತಿಳಿಸಿದರು.
ರೂಪೇ ಕಾರ್ಡ್ ಮೂಲಕ 10 ಸಾವಿರ ರೂ. ಮುಂಗಡ ಹಣವನ್ನು ಸರಕಾರಿ ಉದ್ಯೋಗಿಗಳಿಗೆ ಪಾವತಿಸಲಿದ್ದು, ಅದನ್ನು 2021ರ ಮಾರ್ಚ್ 31ರೊಳಗೆ ಖರ್ಚು ಮಾಡಬಹುದಾಗಿದೆ ಎಂದವರು ಹೇಳಿದರು.ನಾಲ್ಕು ಕಂತುಗಳಲ್ಲಿ ಈ ಮುಂಗಡಹಣವನ್ನು ಮರುಪಾವತಿಸಬಹುದಾಗಿದ್ದು, ಇದಕ್ಕಾಗಿ 4 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದರು.
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರು ಹಾಗೂ ದುರ್ಬಲ ವರ್ಗಗಳ ಅವಶ್ಯಕತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರವು ಈಗಾಗಲೇ ವಿವಿಧ ಯೋಜನೆಗಳನ್ನು ಘೋಷಿಸಿದೆ ಎಂದರು.
ಬಂಡವಾಳ ಯೋಜನೆಗಳಿಗಾಗಿ ರಾಜ್ಯಗಳಿಗೆ 12 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲ
ಇದೇ ವೇಳೆ ಆರ್ಥಿಕತೆಯನ್ನು ಪ್ರೋತ್ಸಾಹಿಸುವ ಯತ್ನವಾಗಿ,ವಿವಿಧ ಬಂಡವಾಳ ಯೋಜನೆಗಳಿಗಾಗಿ ರಾಜ್ಯ ಸರಕಾರಗಳಿಗೆ 50 ವರ್ಷಗಳ ಅವಧಿಯ 12 ಸಾವಿರ ಕೋಟಿ ರೂ.ಗಳ ಬಡ್ಡಿರಹಿತ ಸಾಲವನ್ನು ಕೂಡಾ ವಿತ್ತ ಸಚಿವೆ ಘೋಷಿಸಿದರು.
12 ಸಾವಿರ ಕೋಟಿ ರೂ.ಗಳ ಪೈಕಿ 1,600 ಕೋಟಿ ರೂ.ಗಳನ್ನು ಈಶಾನ್ಯ ಭಾರತದ ರಾಜ್ಯಗಳಿಗೆ ಹಾಗೂ 900 ಕೋಟಿ ರೂ.ಗಳನ್ನು ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಿಗೆ ನೀಡಲಾಗುವುದು. ಉಳಿದ ರಾಜ್ಯಗಳಿಗೆ 7,500 ಕೋಟಿ ರೂ. ಮೀಸಲಿರಿಸಲಾಗಿದೆ. 2 ಸಾವಿರ ಕೋಟಿ ರೂ.ಗಳನ್ನು ಪೂರ್ವಭಾವಿಯಾಗಿ ಘೋಷಿಸಲಾದ ಯೋಜನೆಗಳ ಜಾರಿಗಾಗಿ ರಾಜ್ಯಗಳಿಗೆ ನೀಡಲಾಗುವುದೆಂದರು.
ಕೇಂದ್ರ ಸರಕಾರದಿಂದ 25 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಬಂಡವಾಳ ವೆಚ್ಚವನ್ನು ಕೂಡಾ ವಿತ್ತ ಸಚಿವೆ ಪ್ರಕಟಿಸಿದರು. ಬಜೆಟ್ನಲ್ಲಿ ಘೋಷಿಸಲಾದ 4.13 ಲಕ್ಷ ಕೋಟಿ ರೂ.ಗೆ ಹೆಚ್ಚುವರಿಯಾಗಿ ಈ ಅನುದಾನವನ್ನು ಪ್ರಕಟಿಸಲಾಗಿದೆ. ಹೆಚ್ಚುವರಿ ಅನುದಾನದ ಹಣವನ್ನು ರಸ್ತೆಗಳು, ರಕ್ಷಣಾ ಮೂಲಸೌಕರ್ಯ, ನೀರು ಪೂರೈಕೆ ಹಾಗೂ ನಗರಾಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದೆಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.