ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪಿಗೆ ಗುಂಡೇಟು
ಬೆಂಗಳೂರು, ಅ.12: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ಆರೋಪ ಹೊತ್ತಿದ್ದ ವ್ಯಕ್ತಿಯೋರ್ವನ ಕಾಲಿಗೆ ಇಲ್ಲಿನ ಉತ್ತರ ವಿಭಾಗದ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನೇಶ್(32) ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ತಮಿಳುನಾಡು ಮೂಲದ ರಮೇಶ್(ಹೆಸರು ಬದಲಾಯಿಸಲಾಗಿದೆ) ಎಂಬವರು ಹಲವು ವರ್ಷಗಳಿಂದ ನಗರದಲ್ಲಿ ವ್ಯಾಪಾರಿ ಆಗಿದ್ದು, ಇಲ್ಲಿನ ಸಿಟಿ ರೈಲ್ವೆ ನಿಲ್ದಾಣದ ಹಿಂಭಾಗದ ಗೇಟ್ ಬಳಿ ವಾಸವಾಗಿದ್ದರು.
ಅ.10ರಂದು ರಾತ್ರಿ ನಗರದಲ್ಲಿ ಮಳೆ ಸುರಿಯುತ್ತಿದ್ದ ಪರಿಣಾಮ ರಮೇಶ್, ವ್ಯಾಪಾರ ಮುಗಿಸಿಕೊಂಡು ತನ್ನ ಪತ್ನಿ ಮತ್ತು 4 ವರ್ಷದ ಮಗಳೊಂದಿಗೆ ಸಿಟಿ ರೈಲ್ವೆ ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ಜಾಗದಲ್ಲಿ ಮಲಗಿದ್ದರು. ಈ ವೇಳೆ ದುಷ್ಕರ್ಮಿ 4 ವರ್ಷದ ಮಗಳನ್ನು ಅಪಹರಣ ಮಾಡಿದ್ದಾನೆ. ತದನಂತರ, ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಅ.11ರಂದು ಬಾಲಕಿಯನ್ನು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿರುವ ವಿಷಯ ಗೊತ್ತಾಗಿದ್ದು, ದುಷ್ಕರ್ಮಿಯೋರ್ವ ಅತ್ಯಾಚಾರವೆಸಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಂಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ಎಸ್. ನಾಯ್ಕ್ ನೇತೃತ್ವದ ತಂಡ ಸೋಮವಾರ ಮುಂಜಾನೆ ಕಾರ್ಯಾಚರಣೆ ನಡೆಸಿ, ಆರೋಪಿ ದಿನೇಶ್ ಆರ್ಆರ್ ಕೆ ಜಂಕ್ಷನ್ ಬಳಿ ಇರುವುದಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಶರಣಾಗುವಂತೆ ದಿನೇಶ್ಗೆ ಸೂಚಿಸಿದರೂ, ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದ ಸಂದರ್ಭದಲ್ಲಿ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.