ಅಟಲ್ ಸುರಂಗ ಮಾರ್ಗದ ಶಂಕುಸ್ಥಾಪನೆಯ ಫಲಕದಲ್ಲಿದ್ದ ಸೋನಿಯಾ ಹೆಸರು ಮಾಯ, ಕಾಂಗ್ರೆಸ್ ದೂರು
ಚಂಡಿಗಡ: ಹಿಮಾಚಲಪ್ರದೇಶದಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿರುವ ಅಟಲ್ ಸುರಂಗ ಮಾರ್ಗದ ಶಂಕುಸ್ಥಾಪನೆಯ ಫಲಕದಲ್ಲಿದ್ದ್ದ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಹೆಸರನ್ನು ತೆಗೆದುಹಾಕಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಮಾಚಲಪ್ರದೇಶದ ಕಾಂಗ್ರೆಸ್, ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡಿದೆ.
ಮನಾಲಿಯನ್ನು ಲಾಹೌಲ್-ಸ್ಪಿಟಿ ಕಣಿವೆಗೆ ಸಂಪರ್ಕ ಕಲ್ಪಿಸುವ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಅವರು ಅ.3 ರಂದು ಉದ್ಘಾಟಿಸಿದ್ದರು.
ಸುರಂಗ ಉದ್ಘಾಟನೆಯಾಗುವ ಕೆಲವೇ ಗಂಟೆಗಳ ಮೊದಲು ಸೋನಿಯಾ ಗಾಂಧಿಯವರ ಹೆಸರನ್ನು ಶಂಕು ಸ್ಥಾಪನೆಯ ಫಲಕದಿಂದ ತೆಗೆದುಹಾಕಲಾಗಿತ್ತು ಎಂದು ಆರೋಪಿಸಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕರು, ಇದನ್ನು ಪ್ರತಿಭಟಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ಗೆ ಪತ್ರ ಬರೆಯುವುದಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕುಲ್ದೀಪ್ ಸಿಂಗ್ ರಾಥೋಡ್ ಎಚ್ಚರಿಸಿದ್ದಾರೆ.
ಕಾಣೆಯಾಗಿರುವ ಶಂಕು ಸ್ಥಾಪನೆಯ ಫಲಕವನ್ನು ಮತ್ತೆ ಸ್ಥಾಪಿಸದಿದ್ದರೆ ಸರಕಾರದ ವಿರುದ್ಧ ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದೆ. ಫಲಕವನ್ನು ತೆಗೆದುಹಾಕಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ, ಸಂವಿಧಾನ ವಿರೋಧಿ ಹಾಗೂ ಕಾನೂನು ಬಾಹಿರ ಕ್ರಮವಾಗಿದೆ ಎಂದು ಸಿಂಗ್ ಹೇಳಿದರು.
2010ರ ಜೂನ್ 28ರಂದು ಮನಾಲಿಯ ಧೂಂಡಿಯಲ್ಲಿ ರೋಹ್ಟಂಗ್ ಸುರಂಗ ಯೋಜನೆಗೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕುವ ಕಾರ್ಯಕ್ರಮ ನೆರವೇರಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.