ನೀವು 'ಸೆಕ್ಯುಲರ್' ಆಗಿದ್ದೀರಾ?: ಉದ್ಧವ್ ಠಾಕ್ರೆಗೆ ಮಹಾರಾಷ್ಟ್ರ ರಾಜ್ಯಪಾಲರ ಪ್ರಶ್ನೆ
ಮುಂಬೈ: ಮಹಾರಾಷ್ಟ್ರದಲ್ಲಿ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿಸುವ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ರಾಜ್ಯಪಾಲರ ನಡುವಿನ ಭಿನ್ನಾಭಿಪ್ರಾಯಗಳು ತಾರಕಕ್ಕೇರಿವೆ. ಅಕ್ಟೋಬರ್ 12ರಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಸರಕಾರವನ್ನು ಈ ವಿಚಾರದಲ್ಲಿ ಕಟುವಾಗಿ ಟೀಕಿಸಿ ಪತ್ರ ಬರೆದಿದ್ದು, ನೀವು 'ಸೆಕ್ಯುಲರ್' ಆಗಿದ್ದೀರಾ? ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಪ್ರಶ್ನಿಸಿದ್ದಾರೆ.
ಪತ್ರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯಪಾಲರಿಂದ ತಮಗೆ ಹಿಂದುತ್ವದ 'ಪ್ರಮಾಣಪತ್ರ ಬೇಕಿಲ್ಲ' ಎಂದು ತಿರುಗೇಟು ನೀಡಿದ್ದಾರೆ.
"ಧಾರ್ಮಿಕ ಸ್ಥಳಗಳನ್ನು ತೆರೆಯುವುದನ್ನು ಆಗಾಗ ಮುಂದೂಡಲು ನಿಮಗೆ ದೈವೀ ಸಂದೇಶ ದೊರೆಯುತ್ತಿದೆಯೇ ಅಥವಾ ನೀವು ದಿಢೀರನೇ ಈ ಹಿಂದೆ ದ್ವೇಷಿಸುತ್ತಿದ್ದ ಪದ 'ಜಾತ್ಯತೀತ'ರಾಗಿ ಬಿಟ್ಟಿರಾ?,'' ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದರು.
ಇದಕ್ಕೆ ಉದ್ಧವ್ ತಮ್ಮ ಉತ್ತರದಲ್ಲಿ "ಧಾರ್ಮಿಕ ಸ್ಥಳಗಳನ್ನು ತೆರೆಯುವುದು ಹಿಂದುತ್ವ ಹಾಗೂ ತೆರೆಯದೇ ಇರುವುದು ನಿಮಗೆ ಜಾತ್ಯತೀತವೇ? ನೀವು ರಾಜ್ಯಪಾಲರಾಗಿ ಸ್ವೀಕರಿಸಿದ ಪ್ರಮಾಣ ಜಾತ್ಯತೀತತೆಯ ಆಧಾರದಲ್ಲಿದೆ. ನೀವು ಅದನ್ನು ನಂಬುವುದಿಲ್ಲವೇ?''
ತಮಗೆ ಹಿಂದುತ್ವದ ಕುರಿತು ಭಾಷಣ ನೀಡುವ ಅಗತ್ಯವಿಲ್ಲ ಎಂದು ಹೇಳಿದ ಠಾಕ್ರೆ, "ಸರ್, ನೀವು ನಿಮ್ಮ ಪತ್ರದಲ್ಲಿ ಹಿಂದುತ್ವದ ಕುರಿತು ಉಲ್ಲೇಖಿಸಿದ್ದೀರಿ. ಆದರೆ ನನಗೆ ನಿಮ್ಮಿಂದ ಹಿಂದುತ್ವದ ಪ್ರಮಾಣಪತ್ರ ಅಥವಾ ಭಾಷಣ ಬೇಕಿಲ್ಲ. ನನ್ನ ಮಹಾರಾಷ್ಟ್ರ ಅತವಾ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಬಣ್ಣಿಸುವ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಲು ನನ್ನ ಹಿಂದುತ್ವ ಅನುಮತಿಸುವುದಿಲ್ಲ,'' ಎಂದು ಬರೆದಿದ್ದಾರೆ.